ಚೂಡಿದಾರ ವೇಲ್‍ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಂದೇ ಬಿಟ್ಟ!

ಕಾರವಾರ: ಕುಡಿದ ಮತ್ತಿನಲ್ಲಿ ಚೂಡಿದಾರದ ವೇಲ್‍ನಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗುಳ್ಳಾಪುರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ನಿರ್ಮಲಾ ಶಂಕರ್ ಉಣಕಲ್ (26) ಕೊಲೆಯಾದ ದುರ್ದೈವಿಯಾಗಿದ್ದು, ಆಕೆಯ ಪತಿ ಶಂಕರ್ ಉಣಕಲ್ (34) ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಆಕೆಯ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೂಲ್ಡ್ರಿಂಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿಯ ಮೇಲೆ ಆರೋಪಿ ಸಂಶಯ ಪಟ್ಟರುವುದೇ ಕೊಲೆಗೆ ಕಾರಣ ಎನ್ನಲಾಗಿದೆ.

ಮೂಲತಃ ಗದಗ ಜಿಲ್ಲೆಯ ನರಗುಂದ ನಿವಾಸಿಗಳಾದ ಶಂಕರ್ ಉಣಕಲ್ ಮತ್ತು ಆಕೆಯ ಆತನ ಪತ್ನಿ ನಿರ್ಮಲಾ ಕೆಲಸ ಹುಡುಕುತ್ತಾ ಒಂದು ವರ್ಷದ ಹಿಂದೆ ಗುಳ್ಳಾಪುರಕ್ಕೆ ಬಂದಿದ್ದರು. ಜನತಾ ಕಾಲನಿಯಲ್ಲಿ ಉಸ್ಮಾನ್ ಸಾಬ್ ಎಂಬವರ ಬಾಡಿಗೆ ಮನೆಯಲ್ಲಿ ಇದ್ದರು. ಶಂಕರ್ ಪ್ರತಿದಿನ ಕುಡಿದು ಬಂದು ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಗುರುವಾರ ತಡರಾತ್ರಿ ಕುಡಿದು ಬಂದು ಆಕೆಯ ವೇಲ್ ನಿಂದ ಕುತ್ತಿಗೆ ಬಿಗಿದು ಕೊಂದು ಬೇರೊಬ್ಬರ ಮನೆಗೆ ತೆರಳಿದ್ದಾನೆ.

ಸಂಶಯಗೊಂಡ ಸ್ಥಳೀಯರು ಯಲ್ಲಾಪುರ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಶಂಕರ್ ಉಣಕಲ್ ನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಪಿಎಸ್ ಐ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *