ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

ಬೆಂಗಳೂರು: ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯ ಬಯಕೆ ತೀರಿಸುವುದಾಗಿ ಕರೆದೊಯ್ದು ಕೊಲೆ ಮಾಡಿದ ಘಟನೆ ಎರಡು ತಿಂಗಳ ನಂತರ ಬೆಳಕಿಗೆ ಬಂದಿದೆ.

ಶಶಿಕಲಾ ಕೊಲೆಯಾದ ಗರ್ಭಿಣಿ. ಆರೋಪಿ ಪತಿ ಸತ್ಯರಾಜ್ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ನಡೆದದ್ದು ಏನು?
ಗರ್ಭಿಣಿಯಾಗಿದ್ದ ಶಶಿಕಲಾ ತಾನು ಪ್ರವಾಸ ಮಾಡಬೇಕೆಂಬ ಬಯಕೆಯನ್ನು ಪತಿ ಸತ್ಯರಾಜ್ ಮುಂದಿಟ್ಟಿದ್ದರು. ಹೀಗಾಗಿ ಸತ್ಯರಾಜ್ ಎರಡು ತಿಂಗಳ ಹಿಂದೆ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಯ ಹಿನ್ನೀರಿನ ಜಾಗಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲದೇ ಅಲ್ಲಿಯೇ ಆಕೆಯನ್ನು ನೀರಿಗೆ ನೂಕಿ ಕೊಲೆ ಮಾಡಿದ್ದನು.

ಕೊಲೆ ಮಾಡಿ ಮನೆಗೆ ಬಂದ ಸತ್ಯರಾಜ್, ‘ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಶಶಿಕಲಾ ಫೋನ್‍ನಿಂದ ಆಕೆಯ ಸಂಬಂಧಿಕರಿಗೆ ಮೆಸೇಜ್ ಮಾಡಿದ್ದನು. ಅಷ್ಟಕ್ಕೆ ಬಿಡದೇ ಪುಟ್ಟೇನಹಳ್ಳಿ ಠಾಣೆಯಲ್ಲಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಇಷ್ಟು ಮಾತ್ರವಲ್ಲದೇ ಪೊಲೀಸರಿಗೆ ತನಿಖೆಯಲ್ಲಿ ಸಹಾಯ ಮಾಡುವವನಂತೆ ಕೂಡ ನಟಿಸಿದ್ದನು.

ಸತ್ಯರಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಆತನನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಸತ್ಯರಾಜ್‍ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತ್ಯರಾಜ್ ಹಾಗೂ ಶಶಿಕಲಾ ಮಧ್ಯೆ ಜಗಳವಾಗಿತ್ತು. ಆತ ಸಾಲ ಮಾಡಿಕೊಂಡಿದ್ದನು. ಹೀಗಾಗಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *