ಮದ್ವೆಯಾದ 8ನೇ ದಿನಕ್ಕೆ ಬಾವಿಗೆ ಹಾರಿದ ವಧು- ರಕ್ಷಣೆಗೆ ಮುಂದಾದ ಪತಿಯೂ ಸಾವು

ರಾಯ್ಪುರ: ಮದುವೆಯಾದ ಎಂಟನೇ ದಿನಕ್ಕೆ ನವ ವಿವಾಹಿತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯನ್ನು ಮೇಲೆತ್ತುವಾಗ ಹಗ್ಗ ತುಂಡಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಛತ್ತೀಸ್‍ಗಢದ ಬೈಕುಂಟಪುರದಲ್ಲಿ ನಡೆದಿದೆ.

ಮೇ 2ರಂದು ಪ್ರಿತಪಾಲ್ ಸಿಂಗ್ ಪುತ್ರ 25 ವರ್ಷದ ರಾನು ಸಿಂಗ್ ಮದುವೆ ನೆರೆಯ ಗ್ರಾಮದ ಪೆಂಡ್ರಿಯ ಬಾಲಾಕುಂವರ್ (22) ಯುವತಿಯೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಮೇ 10ರಂದು ತನ್ನ ಸೋದರನಿಗೆ ಕರೆ ಮಾಡಿ ನನ್ನನ್ನು ಕ್ಷಮಿಸಿ ಎಂದು ಹೇಳಿ ವಧು ಬಾವಿಗೆ ಹಾರಿದ್ದಾಳೆ. ಇತ್ತ ಪತ್ನಿ ಮನೆಯಲ್ಲಿ ಕಾಣದಿದ್ದಾಗ ರಾನು ಸಿಂಗ್ ನೆರೆ ಮನೆಯ ಕಡೆ ಹುಡುಕಾಡಿದ್ದಾನೆ. ಹೀಗೆ ಪತ್ನಿಯನ್ನು ಹುಡುಕುತ್ತಿರುವಾಗ ರಾನು ಸಿಂಗ್ ಮನೆಯ ಹಿಂಭಾಗದ ಬಾವಿಯತ್ತ ನೋಡಿದ್ದಾನೆ.

ಬಾವಿ ಬಳಿ ಪತ್ನಿಯ ಮೊಬೈಲ್ ಸಿಕ್ಕಿದೆ. ಬಾವಿಯಲ್ಲಿ ಇಣುಕಿ ನೋಡಿದಾಗ ಪತ್ನಿ ಸಹಾಯಕ್ಕಾಗಿ ನೀರಿನಲ್ಲಿ ಒದ್ದಾಡುತ್ತಿದ್ದನ್ನು ಗಮನಿಸಿದ್ದಾನೆ. ಕೂಡಲೇ ಪತ್ನಿಯ ರಕ್ಷಣೆಗಾಗಿ ರಾನು ಸಿಂಗ್ ಬಾವಿಗೆ ಹಾರಿದ್ದಾನೆ. ಬಾವಿಯೊಳಗೆ ಬಿದ್ದಿದ್ದ ಪತ್ನಿಯನ್ನು ರಕ್ಷಿಸಿ ಸಹಾಯಕ್ಕಾಗಿ ರಾನು ಕೂಗಿಕೊಂಡಿದ್ದಾನೆ. ರಾನು ಧ್ವನಿ ಕೇಳಿ ಬಾವಿ ಹತ್ತಿರ ಬಂದ ಜನರು ಇಬ್ಬರನ್ನು ಮೇಲೆತ್ತಲು ಹಗ್ಗ ನೀಡಿದ್ದಾರೆ.

ಪತ್ನಿ ಜೊತೆ ರಾನು ಮೇಲೆ ಬರುತ್ತಿರುವಾಗ ಹಗ್ಗ ತುಂಡಾಗಿ ಇಬ್ಬರು ಮತ್ತೆ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೇ 11ಕ್ಕೆ ಪೊಲೀಸರು ಎರಡು ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಎರಡೂ ಕುಟುಂಬಗಳ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನವ ವಧುವಿನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Comments

Leave a Reply

Your email address will not be published. Required fields are marked *