ಕಾಂಗ್ರೆಸ್ಸಿನಿಂದ ದಂಗೆ, ಯು.ಟಿ ಖಾದರ್ ಬಂಧಿಸಿ – ಮುತಾಲಿಕ್ ಒತ್ತಾಯ

ಹುಬ್ಬಳ್ಳಿ: ಪೌರತ್ವ ಕಾಯ್ದೆ ಸ್ವಾಗತರ್ಹವಾಗಿದೆ. ಇದಕ್ಕೆ ಈ ದೇಶದ ಕೆಲವೊಂದು ಜನ ಕಾಂಗ್ರೆಸ್ ಕುಮ್ಮಕ್ಕಿನಿಂದ ವಿರೋಧಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಿಲ್‍ನಿಂದ ಇಲ್ಲಿನ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ. ಆದರೆ ಕಾಂಗ್ರೆಸ್ಸಿನವರು ಮುಸ್ಲಿಂರನ್ನು ಎತ್ತಿಕಟ್ಟಿ ದಂಗೆ, ಗಲಾಟೆ ಮಾಡಿಸುತ್ತಿದ್ದಾರೆ. 50 ವರ್ಷದಿಂದ ಕಾಂಗ್ರೆಸ್ ಮುಸ್ಲಿಂರಿಗೆ ಏನು ಮಾಡಿಲ್ಲ. ಈಗ ಮತ್ತೆ ಮುಸ್ಲಿಂರನ್ನು ಬಲಿಪಶು ಮಾಡುತ್ತಿದೆ. ಮುಸ್ಲಿಂರು ಎಚ್ಚೆತ್ತುಕೊಳ್ಳಬೇಕು ಎಂದರು.

ಪೌರತ್ವ ಕಾಯ್ದೆ ಜಾರಿಗೆ ತಂದರೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ ಯು.ಟಿ ಖಾದರ್ ವಿರುದ್ಧ ಮುತಾಲಿಕ್ ಕಿಡಿಕಾರಿದರು. ಖಾದರ್ ಅವರೇ ಮುಸ್ಲಿಮರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ತಡವಾಗಿಯಾದರೂ ಗಲ್ಲು ಶಿಕ್ಷೆ ಖಾಯಂಗೊಳಿಸಿದ್ದು ಸ್ವಾಗತಾರ್ಹ. ಶಿಕ್ಷೆ ನೀಡಲು ಏಳು ವರ್ಷ ಕಳೆದುಹೋಗಿದೆ. ಅದರ ನಡುವೇ ಸಾಕಷ್ಟು ಅತ್ಯಾಚಾರಗಳಾಗಿವೆ. ನ್ಯಾಯಾಲಯ ಇಂತ ಪ್ರಕರಣಗಳಲ್ಲಿ ತೀರ್ಪು ನೀಡಲು ವಿಳಂಬ ಮಾಡಬಾರದು. ಇಂತವರನ್ನು ಎನ್‍ಕೌಂಟರ್ ಮಾಡುವುದೇ ಸರಿ ಅನಿಸುತ್ತೆ. ಇನ್ನು ಮುಂದೆಯೂ ಕೂಡ ತಡ ಮಾಡದೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ತಿಂಗಳು 21 ರಂದು ರಾಜ್ಯಾದ್ಯಂತ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಕೂಡಲೇ ಬಿಲ್ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ಬಾಂಗ್ಲಾದೇಶದಿಂದ ಸಿಂಧನೂರಿಗೆ ಬಂದು ನಿರಾಶ್ರಿತ ಶಿಬಿರದಲ್ಲಿರುವ ಮೇಸ್ತ್ರಿ ಹಾಗೂ ಪ್ರದೀಪ ದಾಸ್ ಎನ್ನುವರು ಈ ಮಸೂದೆ ನಮಗೆ ಖುಷಿಯಾಗಿದೆ. ಇದರಿಂದ ನಾವು ನಿರಾತಂಕವಾಗಿ ಜೀವನ ಸಾಗಿಸಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

Comments

Leave a Reply

Your email address will not be published. Required fields are marked *