ಬಿಜೆಪಿ ಗೋಡ್ಸೆಯನ್ನು ಎಂದೂ ಒಪ್ಪಿಕೊಂಡಿಲ್ಲ, ಗೋಡ್ಸೆ ಸಮಾಜಕ್ಕೆ ಕಪ್ಪು ಚುಕ್ಕಿ – ಶೆಟ್ಟರ್

ಹುಬ್ಬಳ್ಳಿ: ಬಿಜೆಪಿ ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಮತ್ತು ಬಿಜೆಪಿ ಕುರಿತು ರಾಹುಲ್ ಗಾಂಧಿ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿ ಗೋಡ್ಸೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಗೋಡ್ಸೆ ಬಗ್ಗೆ ನಳಿನ್‍ಕುಮಾರ್ ಕಟೀಲ್ ಮತ್ತು ಅನಂತಕುಮಾರ ಹೆಗ್ಡೆ ಅವರ ಟ್ವೀಟ್ ಮಾಡಿರುವುದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿರುವ ವಿಚಾರ ಬಗ್ಗೆ ಕೇಳಿದಾಗ ಅವರು ಏನ್ ಟ್ವೀಟ್ ಮಾಡಿದ್ದಾರೆ ಎಂದು ನಾನು ನೋಡಿಲ್ಲ. ಇದರ ಬಗ್ಗೆ ಕೇಳಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ಮಾಡಿದರು.

ನಾನು ಕೇಳಿದ ಯಾವ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ಕಾವೇರಿ ಅನಧಿಕೃತ ವಾಸದ ಬಗ್ಗೆ ಪ್ರಶ್ನೆ ಕೇಳಿದ್ದೆ ಅದರ ಬಗ್ಗೆ ಯಾವ ಉತ್ತರವನ್ನು ನೀಡಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿಯಲ್ಲಿಯೂ ದ್ವೇಷದ ರಾಜಕಾರಣ ಮಾಡುತ್ತಾರೆ. ಇಂದು ಹುಬ್ಬಳ್ಳಿ-ಧಾರವಾಡದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಸಿದ್ದರಾಮಯ್ಯ ಕಾರಣ. ಹಾವಿಗೆ ದ್ವೇಷ 12 ವರ್ಷ ಆದರೆ ಸಿದ್ದರಾಮಯ್ಯಗೆ ಜೀವ ಇರೋವರೆಗೂ ದ್ವೇಷ ಇರುತ್ತದೆ. ಮಾನ ಮರ್ಯಾದೆ ನಾಚಿಕೆ ಇಲ್ಲದ ಮನುಷ್ಯ ಎಂದರೆ ಅದು ಸಿದ್ದರಾಮಯ್ಯ ಎಂದು ಕಿಡಿಕಾರಿದರು.

ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಂಶಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆಗೆ ಡಿಕೆಶಿ ಚಾಲನೆ ಕೊಟ್ಟಿದ್ದರು. ಆದರೆ ನಿರಂತರವೂ ಇಲ್ಲ ಜ್ಯೋತಿಯೂ ಇಲ್ಲ. ಧಾರವಾಡ ಪೇಡ ಹೇಗೆ ಸಿಹಿಯಿದೆ ಆ ರೀತಿ ಕುಂದಗೋಳ ಅಭಿವೃದ್ಧಿ ಮಾಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ಹಾಗಾದರೆ ಈ ಹಿಂದೆ ಏನ್ ಅಭಿವೃದ್ಧಿ ಮಾಡಿದ್ದೀರಾ? ಬಳ್ಳಾರಿ ಉಸ್ತುವಾರಿಯಾಗಿ ಬೈ ಎಲೆಕ್ಷನ್ ಗೆದ್ದ ನೀವು ಬಳ್ಳಾರಿಯಲ್ಲಿ ಹಣ ಹಂಚುವುದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *