ಹೆಚ್‍ಡಿಕೆಗೆ ತಾಳ್ಮೆ ಇತ್ತು, ಬಿಎಸ್‍ವೈಗೆ ತಾಳ್ಮೆ ಇಲ್ಲ, ಸರ್ಕಾರ ನಡೆಸುವುದು ಕಷ್ಟ- ಹೊರಟ್ಟಿ

ಹುಬ್ಬಳ್ಳಿ: ಯಡಿಯೂರಪ್ಪ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಅವರಿಗೆ ದೇವರ ಒಳ್ಳೆಯದು ಮಾಡಲಿ. ಆದರೆ ಬಿಎಸ್‍ವೈಗೆ ಸರ್ಕಾರ ನಡೆಸುವುದು ತುಂಬಾ ಕಷ್ಟ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಎಂಎಲ್‍ಸಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು, ಆದರೆ ಆ ತಾಳ್ಮೆ ಬಿಎಸ್‍ವೈಗೆ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಸರ್ಕಾರ ನಡೆಯುವುದಿಲ್ಲ. ಸರ್ಕಾರ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯವರು ಅತೃಪ್ತರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಅತೃಪ್ತರನ್ನು ನಿಭಾಯಿಸುವುದು ಯಡಿಯೂರಪ್ಪಗೆ ಬಹಳ ಕಷ್ಟವಾಗುತ್ತದೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರದ ಮೋದಿ ಸರ್ಕಾರ ಪರಿಶೀಲನೆ ನಡೆಸಬೇಕಾಗಿತ್ತು. ಬಿಎಸ್‍ವೈ ಸರ್ಕಾರಕ್ಕೆ ತುಂಬಾ ದಿನ ಆಯುಷ್ಯ ಇಲ್ಲ ಎಂದು ಅವರು ಭವಿಷ್ಯ ನುಡಿದರು.

ಅತೃಪ್ತ ಮೂರು ಶಾಸಕರನ್ನು ಅನರ್ಹ ಮಾಡಿದ್ದು, ಸರಿಯಾದ ಕ್ರಮ. ಸ್ಪೀಕರ್ ರಮೇಶ್ ಕುಮಾರ್ ಬಹಳ ವಿಚಾರಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಇಂದು ಕಾಂಗ್ರೆಸ್ ಬಿಟ್ಟವರು ನಾಳೆ ಬಿಜೆಪಿ ಬಿಡಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ ಬಹಳ ಜನ ಟ್ರಬಲ್ ಶೂಟರ್ ಇದ್ದರು. ಆದರೆ ಬಿಜೆಪಿಯಲ್ಲಿ ಟ್ರಬಲ್ ಕ್ರಿಯೇಟರ್ ಇದ್ದಾರೆ. ಈ ಸರ್ಕಾರ ಬಹಳ ದಿನ ಇರಲಾರದು ಎಂದು ಹೇಳಿದರು.

Comments

Leave a Reply

Your email address will not be published. Required fields are marked *