ನಿರುದ್ಯೋಗಿ ಸಿದ್ದರಾಮಯ್ಯ ಭವಿಷ್ಯದ ಅಂಗಡಿ ತೆರೆದಿದ್ದಾರೆ: ಕಟೀಲ್

ಹುಬ್ಬಳ್ಳಿ: ಶಾಶ್ವತ ನಿರುದ್ಯೊಗಿ ಆಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಈಗ ಭವಿಷ್ಯದ ಅಂಗಡಿ ತೆರೆದು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಚ್ಚಾಟದ ಪಕ್ಷವಲ್ಲ, ಸಾಮರಸ್ಯದ ಪಾರ್ಟಿ. ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿ, ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಆಶೀರ್ವಾದ ಮಾಡಿದಾಗಲೇ ಕಾಂಗ್ರೆಸ್ ಶಾಶ್ವತ ನಿರುದ್ಯೋಗಿಯಾಗಿದೆ. ಹೀಗಾಗಿ ಭವಿಷ್ಯದ ಅಂಗಡಿ ತೆರೆದಿದೆ. ಶಾಶ್ವತವಾಗಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಕಾಲಘಟ್ಟ ತಲುಪಿದೆ ಎಂದರು.

ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತ ಮುಖ್ಯಮಂತ್ರಿ ಆಗಬೇಕು ಎಂಬ ಕಚ್ಚಾಟವೂ ಆ ಪಕ್ಷದಲ್ಲಿ ಜೋರಾಗಿತ್ತು. ಆದರೆ ಸತತ ಸೋಲು, ಅಧಿಕಾರ ಇಲ್ಲದಿರುವ ಕಾಂಗ್ರೆಸ್ಸಿಗೆ ಈಗ ಭವಿಷ್ಯ ಹೇಳುವ ಅಂಗಡಿ ತೆರೆಯುವುದು ಹಾಗೂ ಮೋಸದ ಅಂಗಡಿ ತೆರೆಯುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲದಂತಾಗಿದೆ. ಲೂಟಿಯಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿ ಕುಳಿತು ಇತಿಹಾಸ ಬರೆದವರು, ಮೆರವಣಿಗೆ ಮಾಡಿಕೊಂಡು ವಾಪಸ್ ಬಂದವರು ಕೂಡ ಅಲ್ಲಿದ್ದಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

ಬಿಜೆಪಿ ಹಾಗಲ್ಲ, ನಮ್ಮಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಜಗಳವಿಲ್ಲ. ನಮ್ಮದು ಸಾಮರಸ್ಯದ ಪಾರ್ಟಿ ಎಂಬುದು ಈಗಾಗಲೇ ಸಾಬೀತಾಗಿದೆ. ನಾವು ಚುನಾವಣೆ ಸಮಯದಲ್ಲಿ ಮಾತ್ರ ಜನರ ಬಳಿ ಹೋಗುವುದಿಲ್ಲ. ಅಧಿಕಾರದಲ್ಲಿ ಇರುವಾಗಲೂ ಜನರ ಆಶೀರ್ವಾದ ಕೇಳಲು ಹೋಗುತ್ತೇವೆ. ಅದು ನಮ್ಮ ಸಂಸ್ಕಾರ. ಬಿಜೆಪಿಗೆ ನೆಲೆ ಹಾಗೂ ಸೆಲೆಯಾಗಿರುವ ಹುಬ್ಬಳ್ಳಿಯಿಂದ ಜನಾಶೀರ್ವಾದ ಯಾತ್ರೆ ಆರಂಭಿಸಿದ್ದೇವೆ ಎಂದರು.  ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

Comments

Leave a Reply

Your email address will not be published. Required fields are marked *