ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

ಬೆಂಗಳೂರು: ಕೆಲವು ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ಹಾಸ್ಟೆಲ್ ವಾರ್ಡನ್‍ರೊಬ್ಬರು ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಹಾಸ್ಟೆಲ್ ವಾರ್ಡನ್ ಆಗಿದ್ದ ದೇವೇಂದ್ರಪ್ಪ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದ್ದ ಕೆಲವು ಸ್ಥಳೀಯ ಪರ್ತಕರ್ತರು ದೇವೇಂದ್ರಪ್ಪಗೆ ಧಮ್ಕಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ನಡೆಸಿದ್ದಾರೆಂದು ಹಣಕ್ಕಾಗಿ ಮನೆಯ ಬಳಿ ಹೋಗಿ ದೇವೇಂದ್ರಪ್ಪಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಣ ನೀಡದಿದ್ದರೆ ಲೋಕಾಯುಕ್ತಗೆ ಪತ್ರ ಬರೆದು ಕೆಲಸದಿಂದ ವಜಾ ಮಾಡಿಸುತ್ತೇವೆಂದು ಧಮ್ಕಿ ಹಾಕುತ್ತಿದ್ದರು.

ಹದಿನೈದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿ ಆನೇಕಲ್ ತಾಲೂಕಿನಲ್ಲಿ ದೇವೇಂದ್ರಪ್ಪ ಕೆಲಸ ನಿರ್ವಹಿಸುತ್ತಿದ್ದರು. ಈ ಕಿರುಕುಳದ ಬಗ್ಗೆ ದೇವೇಂದ್ರಪ್ಪ ಸ್ನೇಹಿತರು ಹಾಗು ಪತ್ನಿಯ ಬಳಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರತಿದಿನ ಪತ್ರಕರ್ತರು ನೀಡುತ್ತಿದ್ದ ಕಿರುಕುಳಕ್ಕೆ ನೊಂದಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಕೊನೆ ಉಸಿರೆಳೆದಿದ್ದಾರೆ.

ಸ್ಥಳೀಯ ಪತ್ರಕರ್ತರ ಕಿರುಕುಳದಿಂದ ನೊಂದು ಸಾವನ್ನಪ್ಪಿದ್ದಾರೆಂದು ಹಾಸ್ಟೆಲ್‍ನ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಂದ ಆರೋಪ ಕೇಳಿಬರುತ್ತಿದೆ. ಹಾಗೆಯೇ ದೇವೇಂದ್ರಪ್ಪ ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಕುಟುಂಬದವರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *