ಕೊಪ್ಪಳ ಆಸ್ಪತ್ರೆಯಲ್ಲಿ ಹೈಡ್ರಾಮಾ – ಅಂತ್ಯಸಂಸ್ಕಾರಕ್ಕೆ ದೇಹ ಎತ್ತಿದಾಗ ಕಣ್ಣು ತೆರೆದ ರೋಗಿ

ಕೊಪ್ಪಳ: ಅಂತ್ಯಸಂಸ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಮಹಿಳೆ ಕಣ್ಣು ಬಿಟ್ಟ ಘಟನೆಯೊಂದು ಕೊಪ್ಪಳ ನಗರದ ಕೆ.ಎಸ್ ಆಸ್ಪತ್ರೆಯಲ್ಲಿ ನಡೆದಿದೆ.

28 ವರ್ಷದ ಕವಿತಾ ಮೂಲತಃ ಬಾಗಲಕೋಟೆ ಜಿಲ್ಲೆಯ ಇಲಕಲ್‍ನವರಾಗಿದ್ದು, ಕೊಪ್ಪಳದ ಮಂಜುನಾಥ ಕುಂಬಾರ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಆರು ಮಕ್ಕಳಿದ್ದಾರೆ. ಬಾಗಲಕೋಟೆಯ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಕವಿತಾ ಆರನೇ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಸಂತಾನಹರಣ ಚಿಕಿತ್ಸೆಗೆ ಒಳಗಾದಾಗ ತೀವ್ರ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕೊಪ್ಪಳದ ಕೆ.ಎಸ್ ಆಸ್ಪತ್ರೆ ದಾಖಲಾಗುವಂತೆ ಶಿಫಾರಸ್ಸು ಮಾಡಿದ್ದರು. ಅದರಂತೆ ಕವಿತಾ ಕುಂಬಾರ್ ಜುಲೈ 21ರಂದು ಕೊಪ್ಪಳದ ಕೆ.ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಕವಿತಾ ಕಳೆದ ಮೂರು ದಿನಗಳಿಂದ ಕೆ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ಸೋಮವಾರ ರಾತ್ರಿ 40 ಸಾವಿರ ಬಿಲ್ ಪಾವತಿಸಿಕೊಂಡಿದ್ದು, ಇಲ್ಲಿಯವರೆಗೂ ಒಟ್ಟು 1 ಲಕ್ಷ ಬಿಲ್ ಪಾವತಿಸಿಕೊಂಡಿದ್ದಾರೆ. ಬಿಲ್ ಪಾವತಿಸಿಕೊಂಡ ಬಳಿಕ ಕವಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ಕವಿತಾ ಮೃತಪಟ್ಟಿದ್ದಾರೆ ಎಂದು ಹೇಳಿದ ನಂತರ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿಕೊಂಡಿದ್ದರು. ಸಂಬಂಧಿಕರು ಇಂದು ಬೆಳಗ್ಗೆ ಮೃತದೇಹ ತೆಗೆದುಕೊಂಡು ಹೋಗಲು ದೇಹ ಎತ್ತಿಕೊಳ್ಳುತ್ತಿದ್ದಾಗ ಕವಿತಾ ಕಣ್ಣು ತೆರೆದಿದ್ದಾರೆ.

ಕವಿತಾ ಕಣ್ಣು ತೆರೆದಿದ್ದನ್ನು ನೋಡಿದ ಸಂಬಂಧಿಕರು ದಂಗಾಗಿ ಹೋಗಿದ್ದಾರೆ. ಕವಿತಾ ಬದುಕಿರುವುದನ್ನು ನೋಡಿ ಅಂತ್ಯಸಂಸ್ಕಾರಕ್ಕೆಂದು ಬಂದ ಸಂಬಂಧಿಕರು ಆಸ್ಪತ್ರೆ ಎದುರು ಗಲಾಟೆ ಮಾಡಿದ್ದಾರೆ. ಆಸ್ಪತ್ರೆಗೆ ಪೊಲೀಸರು ದೌಡಾಯಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *