ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕ್ವಾರಂಟೈನ್‍ನಲ್ಲಿರುವ ಜನರ ಕಿರಿಕ್ ಜಾಸ್ತಿಯಾಗುತ್ತಿದೆ. ನಮಗೆ ಬ್ರಾಂಡೆಡ್ ಐಟಂ ಬೇಕು ಅಂತ ಸಿಬ್ಬಂದಿಗೆ ಒತ್ತಡ ಹಾಕುತ್ತಿದ್ದಾರೆ.

ಉಡುಪಿ ಜಿಲ್ಲೆಯ ನರ್ಸ್, ಆಶಾ ಕಾರ್ಯಕರ್ತರಿಗೆ ಕ್ವಾರಂಟೈನ್‍ಗಳು ದುಂಬಾಲು ಬೀಳುತ್ತಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಒಂದು ತಿಂಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿತ್ತು. ಕುಟುಂಬದ ಯಾವ ಸದಸ್ಯರು ಹೊರಗೆ ಬಾರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ದಿಗ್ಬಂಧನ ಹಾಕಿದ್ದರು.

ಒಂದು ಕುಟುಂಬಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸರ್ಕಾರದ ಮೂಲಕವೇ ಪೂರೈಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಇದೇ ಆದೇಶ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಹೋಂ ಕ್ವಾರಂಟೈನ್‍‍ನಲ್ಲಿರುವ ವ್ಯಕ್ತಿಗಳು ಬ್ರಾಂಡೆಡ್ ದಿನಸಿ, ಸೋಪು -ಶ್ಯಾಂಪು ತಂದು ಕೊಡಿ ಅಂತ ಒತ್ತಡ ಹಾಕುತ್ತಿದ್ದಾರೆ.

ವಿದೇಶದಿಂದ ವ್ಯಕ್ತಿಗೆ ಸೋಂಕು ತಗುಲಿದ ಮೇಲೆ ಆತನ ಸಂಪರ್ಕದಲ್ಲಿದ್ದ ನೂರಾರು ಜನರನ್ನು ಉಡುಪಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೈ ರಿಸ್ಕ್ ಇರುವವರನ್ನು ಕೆಲ ಖಾಸಗಿ ಆಸ್ಪತ್ರೆಯಲ್ಲಿ ಇಟ್ಟು ನಿಗಾ ವಹಿಸಲಾಗಿದೆ. ಆದರೆ ಇವರು ನಮಗೆ ಬ್ರಾಂಡೆಡ್ ಮಾಸ್ಕ್, ಸ್ಯಾನಿಟೈಸರ್, ಕೈ ತೊಳೆಯಲು ದುಬಾರಿ ಸೋಪುಗಳ ಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

ಕೆಲ ದೇವಸ್ಥಾನ, ಸಾರ್ವಜನಿಕ ಸಂಸ್ಥೆಗಳಿಂದ ಬಂದ ಆಹಾರವನ್ನು ಕ್ವಾರಂಟೈನ್‍‍ನಲ್ಲಿರುವ ವ್ಯಕ್ತಿಗಳಿಗೆ ವಿತರಿಸಲಾಗುತ್ತಿದೆ. ಅದರಲ್ಲೂ ಸಾರಿನಲ್ಲಿ ಉಪ್ಪಿಲ್ಲ, ಪಲ್ಯಕ್ಕೆ ಖಾರ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ನಾನ್ ವೆಜ್ ಬೇಕು ಎಂದು ಕೇಳುತ್ತಿದ್ದಾರಂತೆ.

ವೈದ್ಯಕೀಯ ಸಿಬ್ಬಂದಿಯ ಸಂಘದ ಅಧ್ಯಕ್ಷ ಮಾತನಾಡಿ, ಇದು ಕಷ್ಟದ ಕಾಲ. ಈಗ ನಿಮ್ಮ ಇಚ್ಛೆಯನ್ನು ಪೂರೈಸೋಕೆ ಆಗಲ್ಲ. ಜಿಲ್ಲಾಧಿಕಾರಿಗಳ ಟಾಸ್ಕ್ ಫೋರ್ಸ್ ಜೊತೆ ಕೈ ಜೋಡಿಸಿ. ನಮ್ಮ ಸಿಬ್ಬಂದಿಯ ಜೊತೆ ಸಹಕರಿಸಿ ಎಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *