ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

ಚಿಕ್ಕಬಳ್ಳಾಪುರ: ಮನೆಯ ಮಾಲೀಕ ಹಾಗೂ ಬಾಡಿಗೆದಾರನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆ ಮಾಲೀಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ನಗರದ ಎನ್.ಆರ್.ಬಡಾವಣೆಯ ನಿವೃತ್ತ ಇಂಜನಿಯರ್ 61 ವರ್ಷದ ಶಂಕರಾಚಾರಿ ಮೃತ ಮನೆ ಮಾಲೀಕ. ನಾರಾಯಣಸ್ವಾಮಿ ಕೊಲೆ ಮಾಡಿದ ಬಾಡಿಗೆದಾರ.

ಮೃತ ಶಂಕರಾಚಾರಿಯವರದ್ದು ಒಂದು ಅಂತಸ್ತಿನ ಮನೆ ಇದ್ದು, ಕೆಳಭಾಗದ ಮನೆಯನ್ನು ನಾರಾಯಣಸ್ವಾಮಿ ಹಾಗೂ ಅರುಣಾ ದಂಪತಿಗೆ ಭೋಗ್ಯಕ್ಕೆ ನೀಡಿದ್ದರು. ಮನೆ ಮಾಲೀಕ ಶಂಕರಾಚಾರಿ ಮೊದಲ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಮನೆ ಮಾಲೀಕ ಶಂಕರಾಚಾರಿ ಹಾಗೂ ನಾರಾಯಣಸ್ವಾಮಿ ಕುಟುಂಬಗಳ ನಡುವಿನ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಸು ಮೂಡಿ ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿ ಭೋಗ್ಯದ ಅವಧಿ ಮುಗಿದ ಕೂಡಲೇ ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರಂತೆ.

ಬೀಗದ ಕೈ ಸಂಬಂಧ ಕಲಾಟೆ
ಮನೆಯ ಪಕ್ಕದಲ್ಲಿ ವಾಹನಗಳ ನಿಲುಗಡೆ ಶೆಡ್ ಇದ್ದು ಶೆಡ್ ನ ಬೀಗದ ಕೈ ಮನೆ ಮಾಲೀಕರ ಬಳಿ ಇತ್ತು. ಬೆಳಗ್ಗೆ ಎಷ್ಟು ಹೊತ್ತಾದರೂ ಶೆಡ್ ಬೀಗ ತೆಗೆಯಲ್ಲ ಬೀಗದ ಕೀ ಕೊಡುವಂತೆ ಶಂಕರಾಚಾರಿ ಜೊತೆ ನಾರಾಯಣಸ್ವಾಮಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆರು ಕೀ ಕೊಡಲ್ಲ ಅಂದಾಗ ಬಲವಂತವಾಗಿ ಕೀ ಕಸಿದುಕೊಳ್ಳಲು ಅರುಣಾ ಮುಂದಾಗಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರಾಚಾರಿ ಕೆಳಗೆ ಬಿದ್ದು, ತಲೆಗೆ ಗಾಯವಾಗಿದೆ.

ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರಾಚಾರಿ ಮೃತಪಟ್ಟಿದ್ದಾರೆ. ಸದ್ಯ ಮನೆಯ ಬಾಡಿಗೆದಾರರಾದ ನಾರಾಯಣಸ್ವಾಮಿ ಹಾಗೂ ಅರುಣಾರನ್ನು ಕೊಲೆ ಪ್ರಕರಣದಡಿ ಚಿಂತಾಮಣಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *