ಟಿಕೆಟ್ ಘೋಷಣೆ ಆದಾಗ ಕ್ಷೇತ್ರದಲ್ಲಿ ಅಸಮಾಧಾನ ಸಹಜ: ಪರಮೇಶ್ವರ್

– ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ

ಬೆಂಗಳೂರು: 7 ಲೋಕಸಭಾ ಕ್ಷೇತ್ರಗಳಿಗೆ ಪಕ್ಷದಿಂದ (Congress) ಟಿಕೆಟ್ ಘೋಷಣೆ ಮಾಡಿರುವುದರಿಂದ ಕೆಲವು ಕಡೆ ಅಸಮಾಧಾನ ಸಹಜ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ತುಮಕೂರು (Tumakuru) ಗೆಲ್ಲೋ ಕ್ಷೇತ್ರ, ಗೆಲ್ಲುವ ಸಾಧ್ಯತೆ ಇದೆ. ಎಲ್ಲರೂ ಪ್ರಯತ್ನ ಮಾಡಬೇಕು. ಕೆಲವರು ನಮಗೆ ಬೇಕು ಎಂದು ಕೇಳಿದ್ದಾರೆ. ಕೆಲವರಲ್ಲಿ ಸ್ವಲ್ಪ ಅಸಮಾಧಾನ ಇರುತ್ತೆ. ಅದನ್ನೆಲ್ಲಾ ಸರಿಮಾಡಿಕೊಂಡು ಹೋಗಬೇಕು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಾನ-ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಟೀಕೆ

ಬಾಕಿ ಉಳಿದ ಕ್ಷೇತ್ರಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದೇ 11ಕ್ಕೆ ಎಲ್ಲಾ ಬಗೆಹರಿಸುತ್ತೇವೆ ಎಂದು ಅಧ್ಯಕ್ಷರೇ ಹೇಳಿದ್ದಾರೆ. ಅಸಮಾಧಾನಿತರನ್ನ ಕೂರಿಸಿಕೊಂಡು ಮನವೊಲಿಸುವ ಕೆಲಸ ಮಾಡುತ್ತೇವೆ. ಬಹಳ ಜನ ಆಕಾಂಕ್ಷಿಗಳಿದ್ದು, ಸ್ಕ್ರೀನಿಂಗ್ ಮಾಡಿ ಲಿಸ್ಟ್ ತೆಗೆದುಕೊಂಡು ಹೋಗಿದ್ದರು. ಹೈಕಮಾಂಡ್ ರೆಕಮಂಡ್ ಮಾಡಿ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆಯವರ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ. ಅಂತಿಮವಾಗಿ ಅವರೇ ತೀರ್ಮಾನ ಮಾಡಬೇಕು. ಅವರು ಎಐಸಿಸಿ ಅಧ್ಯಕ್ಷರಿದ್ದಾರೆ, ತೀರ್ಮಾನ ಮಾಡ್ತಾರೆ. ಅವರ ಸ್ಪರ್ಧೆ ಬಗ್ಗೆ ನಾವು ಹೇಳೋಕೆ ಆಗಲ್ಲ. ದಲಿತ ಸಮುದಾಯಕ್ಕೆ ಬೇರೆ ಕ್ಷೇತ್ರ ಕೇಳಿರೋದು ಗೊತ್ತಿಲ್ಲ. ಆ ರೀತಿಯ ಪ್ರಪೋಸಲ್‌ ಇಲ್ಲ ಎಂದಿದ್ದಾರೆ.

ಇನ್ನೂ ಜಾತಿ ಜನಗಣತಿ ಬಿಡುಗಡೆ ಆಗಿಲ್ಲ. ಈಗ ಸ್ಥಿರವಾದ ಸರ್ಕಾರವಿದೆ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ದಲಿತ ಸಿಎಂ ಅಪ್ರಸ್ತುತ ವಿಚಾರವಾಗಿದೆ. ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಮಾಡದೇ ಇರೋದೇ ಸೂಕ್ತ. ಹೆಚ್ಚಿನ ಸೀಟು ಗೆಲ್ಲೋಕೆ ನಾವು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟು ಬರಲಿದೆ. ಆಡಳಿತ ನಡೆಸಲು ಸುಗಮವಾಗಲಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ. ಮತ ಹಾಕಿಸಿಕೊಳ್ಳಲು ಮನವೊಲಿಕೆ ಮಾಡ್ತಾರೆ ಅಂತಾ ಒಬ್ರು ಹೇಳ್ತಾರೆ. ಇನ್ನೊಬ್ರು ಈಗ್ಯಾಕೆ ಅದೆಲ್ಲಾ ಅಂತಾರೆ. ಚರ್ಚೆಗೆ ಬಿಟ್ಟರೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ. ಈಗ ದಲಿತ ಸಿಎಂ ಅಪ್ರಸ್ತುತ ಅನ್ನೋದು ನನ್ನ ಅನಿಸಿಕೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೇವರ ಹುಂಡಿಗೆ ಹಣ ಹಾಕುವುದು ಅಸಹ್ಯಕರ: ಸಾಹಿತಿ ಕುಂ.ವೀರಭದ್ರಪ್ಪ