ಗ್ರಾಮೀಣ ಜನರಿಗೆ ಎಚ್‍ಐವಿ ಬಗ್ಗೆ ಅರಿವು – ಡಿ.26ರಿಂದ ಜಾಗೃತಿ ಆಂದೋಲನ

ಬೆಳಗಾವಿ: ಸಾಮಾನ್ಯ ಜನರಿಗೆ ಎಚ್‍ಐವಿ, ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಡಿ. 26ರಿಂದ ಮನೆ ಮನೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದಿಂದ ಜನ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕೇಸ್ಯಾಪ್ಸ್ ಜಂಟಿ ನಿರ್ದೇಶಕ ಡಾ. ಸಂಜಯ್ ಪಾಟೀಲ್ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಲ್ಲಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಆಂದೋಲನವನ್ನು ನಡೆಸಲಾಗುತ್ತಿದೆ. ಎಚ್‍ಐವಿ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾಡುವುದು. ಸೋಂಕಿತರಿಗೆ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿಯನ್ನು ಮನೆ ಮನೆಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಸೋಂಕಿನ ಬಗ್ಗೆ ಸರಿಯಾದ ತಿಳುವಳಿಕೆ ಹಾಗೂ ಜ್ಞಾನವನ್ನು ಹೆಚ್ಚಿಸಬೇಕಿದೆ. ಎಚ್‍ಐವಿ ಸೊಂಕಿನ ತಡೆ ಮತ್ತು ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಹೆಚ್ಚಿನ ಜನರನ್ನು ಐಸಿಟಿಸಿ ಕೇಂದ್ರಗಳಿಗೆ ಭೇಟಿ ನೀಡಿ ಎಚ್‍ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿಯಿಂದ ನೋಡಿಕೊಳ್ಳುವುದು. ಸೋಂಕಿತರಲ್ಲಿರುವ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಎಲ್ಲಾ ಗರ್ಭಿಣಿಯರು ತಮ್ಮ ಮೊದಲನೇ ತ್ರೈಮಾಸಿಕದಲ್ಲಿ ಎಚ್‍ಐವಿ ಪರೀಕ್ಷೆ ಮಾಡಿಸಿಕೊಂಡು ಸೊಂಕು ಕಂಡುಬಂದಲ್ಲಿ ಏಆರ್‍ಟಿ ಚಿಕಿತ್ಸೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಅವರಿಗೆ ಮನವೊಲಿಸಲಾಗುವುದು. ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುಮಾರು 9,34,720 ಮನೆಗಳಿದ್ದು, ಶೆ. 70ರಷ್ಟು ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಎಚ್‍ಐವಿ ಬಗ್ಗೆ ಜಾಗೃತಿ ಆಂಧೋಲನ ನಡೆಸುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 6 ಆ್ಯಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳು, 14 ಲಿಂಕ್ ಆ್ಯಂಟಿ ರೆಟ್ರೋವೈರಲ್ ಥೆರಪಿ ಮತ್ತು 9 ಲಿಂಕ್ ಪ್ಲಸ್ ಥೆರಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 36,758 ಜನರು ಈವರೆಗೆ ಆ್ಯಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳಲ್ಲಿ ನೋಂದಣಿಯಾಗಿದ್ದಾರೆ. ಈ ಪೈಕಿ 19,309 ಸೋಂಕಿತರು ಕಂಡು ಬಂದಿದ್ದಾರೆ. 19,277 ಸೋಂಕಿತರಿಗೆ ಆ್ಯಂಟಿ ರೆಟ್ರೋವೈರಲ್ ಥೆರಪಿ ಔಷಧಿಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *