ಟೀಚರ್ ಹೊಡೆತದಿಂದ 3ನೇ ಕ್ಲಾಸ್ ಬಾಲಕನ ಬಲ ಕಿವಿಯೇ ಕಿವುಡಾಯ್ತು!

ನವದೆಹಲಿ: ಟೀಚರ್ ಹೊಡೆದಿದ್ದರಿಂದ 3ನೇ ಕ್ಲಾಸಿನ ಬಾಲಕನಿಗೆ ಬಲದ ಕಿವಿ ಕೇಳಿಸುವ ಸಾಮಥ್ರ್ಯವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ಘಟನೆ ದೆಹಲಿಯ ಭಾಯ್ ಪರ್ಮಾನಂದ್ ವಿದ್ಯಾಮಂದಿರ್ ಶಾಲೆಯಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಬಾಲಕ ಶಾಲೆಗೆ ತೆರಳದೆ ಮನೆಯಲ್ಲಿದ್ದು, ಕಿವಿಗೆ ಚಿಕಿತ್ಸೆ ನಡೆಯುತ್ತಿದೆ.

ಕಳೆದ ವರ್ಷ ಕೂಡ ಮಗನಿಗೆ ಇನ್ನೊಬ್ಬ ಟೀಚರ್ ಹೊಡೆದಿದ್ದರಿಂದ ಆತನ ಭುಜಕ್ಕೆ ಗಂಭೀರ ಗಾಯವಾಗಿತ್ತು. ಇದೀಗ ಮತ್ತೆ ಅದೇ ಘಟನೆ ಸಂಭವಿಸಿದ್ದು, ಬಲದ ಕಿವಿ ಕೇಳಿಸುತ್ತಿಲ್ಲ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ಕಳೆದ ವರ್ಷ ಆತನ ಭುಜಕ್ಕೆ ಏಟಾಗಿದ್ದರಿಂದ ಕೂಡಲೇ ಪೊಲೀಸರಿಗೆ ದೂರು ದಾಖಲಿಸಿದ್ದೆವು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆತ ಟಾರ್ಗೆಟ್ ಆಗಿದ್ದನು. ಇದೀಗ ಮತ್ತೆ ಟೀಚರ್ ಆತನಿಗೆ ಹೊಡೆದಿದ್ದಾರೆ. ಪರಿಣಾಮ ಆತನ ಬಲದ ಕಿವಿಗೆ ಗಂಭೀರ ಗಾಯವಾಗಿದ್ದು, ಇನ್ಯಾವತ್ತೂ ಆತನಿಗೆ ಬಲದ ಕಿವಿ ಕೇಳಿಸಲ್ಲ ಅಂತ ವೈದ್ಯರು ಹೇಳಿದ್ದಾರೆ. ಸದ್ಯ ನನ್ನ ಮಗನಿಗೆ ಏಟು ಕೊಟ್ಟ ಆ ಟೀಚರ್ ನನ್ನು ಕೆಲಸದಿಂದ ವಜಾ ಮಾಡಬೇಕೆಂದು ಬಾಲಕನ ತಾಯಿ ಆಗ್ರಹಿಸಿದ್ದಾರೆ.

ಇನ್ನು ಈ ಕುರಿತು ಶಾಲೆಯ ಪ್ರಾಂಶುಪಾಲರಾದ ಅಜಯ್ ಪಾಲ್ ಸಿಂಗ್ ಮಾತನಾಡಿ, ಘಟನೆ ಕುರಿತಂತೆ ಈಗಾಗಲೇ ಆ ಟೀಚರ್ ಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು, ತನಿಖೆ ಮುಂದುವರೆದಿದೆ ಅಂತ ಹೇಳಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಪೊಲೀಸರು ತನಿಖೆ ನಡೆಸಲು ಸಹಾಯವಾಗುತ್ತದೆ ಅಂತ ಬಾಲಕನ ಪೋಷಕರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *