ಪೊಲೀಸ್ ಪೇದೆಯಿಂದಲೇ ಮತಾಂತರ- ಅಮಾಯಕ ಮಹಿಳೆಯರೇ ಟಾರ್ಗೆಟ್

– ರೂಮಿನಲ್ಲಿ ಕೂಡಿ ಹಾಕಿ ಒತ್ತಾಯದ ಮತಾಂತರ

ಬಾಗಲಕೋಟೆ: ಡಿಆರ್ ಪೊಲೀಸ್ ಪೇದೆ ಅಮಾಯಕ ಮಹಿಳೆಯರನ್ನು ರೂಮಿನಲ್ಲಿ ಕೂಡಿ ಹಾಕಿ ಒತ್ತಾಯದಿಂದ ಮತಾಂತರ ಮಾಡಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ತುಕಾರಾಮ್ ರಾಠೋಡ್ ಎಂಬಾತನೇ ಮತಾಂತರಕ್ಕೆ ಮುಂದಾಗಿದ್ದನು. ಬಾಗಲಕೋಟೆ ನವನಗರದ ಸೆಕ್ಟರ್ 31 ರಲ್ಲಿ ಘಟನೆ ನಡೆದಿದ್ದು, ಆಸೆ, ಆಮಿಷ ತೋರಿಸಿ 35ಕ್ಕೂ ಹೆಚ್ಚು ಮಹಿಳೆಯರನ್ನು ಮತಾಂತರ ಮಾಡುತ್ತಿದ್ದನು. ಪೊಲೀಸ್ ಇಲಾಖೆ ನೌಕರರೇ ಮತಾಂತರ ಕಾರ್ಯಕ್ಕೆ ಇಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಈತ ಪ್ರಾರ್ಥನೆಯ ಹೆಸರಲ್ಲಿ ಅಮಾಯಕ ಮಹಿಳೆಯರನ್ನು ಒತ್ತಾಯ ಪೂರ್ವಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಲು ಮುಂದಾಗಿದ್ದ. ಈ ವೇಳೆ ಬಂಜಾರ್ ಸಮುದಾಯ ಹಾಗೂ ಹಿಂದೂ ಸಂಘಟನೆಯ ಮುಖಂಡರು ದಾಳಿ ನಡೆಸಿದ್ದು, ತುಕಾರಾಮ್‌ಗೆ ಭರ್ಜರಿ ತರಾಟೆ ತೆಗದುಕೊಂಡಿದ್ದಾರೆ. ಮತಾಂತರ ಮಾಡಿಸುತ್ತಿರುವುದು ಖಚಿತವಾಗಿದ್ದರಿಂದ ಪೇದೆಯನ್ನು ಥಳಿಸಿದ್ದಾರೆ.

ಮತಾಂತರ ಕಾರ್ಯಕ್ಕೆ ಮುಂದಾಗಿದ್ದ ತುಕಾರಾಮ್‌ಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಗೂಸಾ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನವನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಯನ್ನು ತಿಳಿಗೊಳಿಸಿದ್ದಾರೆ. ಆದರೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳದೇ ಬಿಟ್ಟು ಕಳುಹಿಸಿದ್ದಕ್ಕೆ ಹಿಂದೂ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *