ಮನೆಯವರ ವಿರೋಧದ ಮಧ್ಯೆಯೂ ಹಿಂದೂ ಯುವಕ- ಮುಸ್ಲಿಂ ಯುವತಿ ಸತಿಪತಿಗಳಾದ್ರು

– ಮತಾಂತರವಾಗಲ್ಲ, ಎಷ್ಟೇ ಕಷ್ಟ ಬಂದ್ರೂ ಇಬ್ರೂ ಒಟ್ಟಿಗೆ ಬಾಳ್ತೀವಿ ಎಂದ ಜೋಡಿ

ಉಡುಪಿ: ಆತ ಹಿಂದೂ, ಆಕೆ ಮುಸ್ಲಿಂ. ಅವರಿಬ್ಬರದ್ದು ಎರಡು ವರ್ಷಗಳ ಹಿಂದಿನ ಪ್ರೀತಿ. ಸಲ್ಮಾ ಮನೆಯವರ ವಿರೋಧದ ನಡುವೆಯೇ ಮನೆಬಿಟ್ಟು ಬಂದು ಕರಿಮಣಿಗೆ ಕೊರಳು ಕೊಟ್ಟಿದ್ದಾಳೆ. ಇಬ್ಬರ ಪ್ರೀತಿಗೆ ಕುಂದಾಪುರದ ಸಾಂತ್ವಾನ ಕೇಂದ್ರ ಬೆಂಬಲ ನೀಡಿದೆ. ಆದ್ರೆ ಈಗ ಸಲ್ಮಾ ಕುಟುಂಬದ ಮುಂದಿನ ನಡೆಯ ಬಗ್ಗೆ ನವ ಜೋಡಿಗೆ ಭಯ ಶುರುವಾಗಿದೆ.

ವಧುವಿನ ಪೋಷಾಕಿನಲ್ಲಿ ಸಿಂಗಾರಗೊಂಡಿರುವ ಈಕೆ ಸಲ್ಮಾ. ಮದುವೆಯ ಖುಷಿಯಲ್ಲಿರುವ ಈತ ವಿವೇಕ್. ಇಬ್ಬರೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ಕುಂಭಾಸಿಯ ವಿನಾಯಕ ನಗರದಲ್ಲಿರುವ ಇವರಿಬ್ಬರಿಗೆ 2 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು. ಇಬ್ಬರ ಪ್ರೀತಿಗೆ ಸಲ್ಮಾ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಮದುವೆಗೆ ಒಪ್ಪದಿದ್ರೆ ನಾನು ಸಾಯ್ತೇನೆ ಅಂತ ಹೇಳಿದ ಕೂಡಲೇ ವಿವೇಕ್ ಮನೆಯವರು ಮದುವೆಗೆ ಒಪ್ಪಿದ್ರು. ಸಾಂತ್ವನ ಕೇಂದ್ರದಲ್ಲಿ ಸಿಂಪಲ್ಲಾಗಿ ಸಲ್ಮಾ ಮತ್ತು ವಿವೇಕ್ ಸತಿಪತಿಗಳಾದರು. ಹಾರ ಬದಲಿಸಿಕೊಂಡು, ಕರಿಮಣಿ ಕಟ್ಟಿಕೊಂಡು ಮದುವೆ ಸಂಪ್ರದಾಯ ಮುಗಿಸಿದರು.

ಸಲ್ಮಾ ಮನೆಯಲ್ಲಿ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮತಾಂತರಕ್ಕೆ ಒಪ್ಪಿದರೆ ಕುಟುಂಬದೊಳಗೆ ಸೇರಿಸಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಆದ್ರೆ ಈ ಜೋಡಿ ಮತಾಂತರಕ್ಕೆ ಒಪ್ಪುತ್ತಿಲ್ಲ. ನಾನು ಸಲ್ಮಾ ಆಗಿಯೇ ಮುಂದುವರೆಯುತ್ತೇನೆ ಅಂತಿದ್ದಾರೆ ಈಕೆ. ನಾನೂ ನನ್ನ ಧರ್ಮ ಬಿಡುವುದಿಲ್ಲ ಎಂದಿರುವ ವಿವೇಕ್, ಎಷ್ಟೇ ಕಷ್ಟ ಬಂದ್ರೂ ಇಬ್ಬರೂ ಒಟ್ಟಿಗೆ ಬಾಳುತ್ತೇವೆ ಅಂತ ಕೈ ಕೈ ಹಿಡಿದು ನಿರ್ಧಾರ ಮಾಡಿದ್ದಾರೆ. ಮದುವೆಯ ನಂತರ ಪೊಲೀಸರು ರಕ್ಷಣೆ ಕೊಡಬೇಕು ಅಂತ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾ ದಾಸ್ ಒತ್ತಾಯಿಸಿದ್ದಾರೆ.

 

Comments

Leave a Reply

Your email address will not be published. Required fields are marked *