ನನಗಿಂತ ಉತ್ತಮ ಹಿಂದೂ ಯಾರಿದ್ದಾರೆ : ಸಿದ್ದರಾಮಯ್ಯ

ಹುಬ್ಬಳ್ಳಿ: ನನಗಿಂತ ಉತ್ತಮ ಹಿಂದೂ ಯಾರಿದ್ದಾರೆ? ಮನುಷ್ಯತ್ವ ಇದ್ದರೆ ಹಿಂದೂ, ಇಲ್ಲದಿದ್ದರೆ ಹಿಂದೂ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಬುದ್ಧಿ ಜೀವಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ಸಭೆಗೆ ಯಾರು ಬರುತ್ತಾರೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಸಭಾ ಚುನಾವಣೆ ಹಾಗೂ ಪ್ರಣಾಳಿಕೆ ಸಿದ್ಧತೆಯ ಕುರಿತು ಚರ್ಚೆ ಮಾಡಲಿದ್ದಾರೆ ಎಂದರು.

ರಫೇಲ್ ಯುದ್ಧ ವಿಮಾನ ಹಗರಣದ ಕುರಿತು ಮಾತನಾಡಿದ ಅವರು, ರಫೇಲ್ ದಾಖಲೆಗಳು ಕಳ್ಳತನವಾಗಿವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಈಗ ಫೋಟೋ ಕಾಪಿ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ. ಅವರ ಹೇಳಿಕೆಯಲ್ಲಿ ಯಾವುದನ್ನು ನಂಬಬೇಕು? ಈ ರೀತಿ ಹೇಳಿದರೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕಳ್ಳತನವಾಗಿರುವುದು ನಿಜ ಅನಿಸುತ್ತದೆ ಎಂದು ಆರೋಪಿಸಿದರು.

ಏರ್ ಸ್ಟ್ರೈಕ್‍ನಿಂದ ನಾವು ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಾರೆ. ಅಂದರೆ ಬಿಜೆಪಿಯವರಿಗೆ ಭಾರತೀಯ ಯೋಧರ ಸಾವಿನಿಂದ ಲಾಭ ಆಗುತ್ತದೆ ಎನ್ನುವಂತಾಗಿದೆ. ಸೈನಿಕರು ಹಾಗೂ ರೈತರ ಮೇಲೆ ಕಾಂಗ್ರೆಸ್ಸಿಗೆ ಇರುವಷ್ಟು ಗೌರವ ಬಿಜೆಪಿಯವರಿಗಿಲ್ಲ. ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದ್ದು ಕಾಂಗ್ರೆಸ್‍ನ ಲಾಲ್‍ಬಹಾದ್ದೂರ್ ಶಾಸ್ತ್ರಿ. ದೇಶದ ರಕ್ಷಣೆ ವಿಚಾರ ಬಂದಾಗ ನಾವು ಒಟ್ಟಾಗಿ ಹೋಗಿದ್ದೇವೆ. ನಮಗೆ ಸೈನಿಕರ ಬಗ್ಗೆ ಅಪಾರ ಗೌರವವಿದೆ. ಯೋಧರ ಬಲಿದಾನದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಹೇಳಿಕೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸಚಿವ ಹೇಳಿಕೆಗೆ ಸುಮಲತಾ ಅಂಬರೀಶ್ ಅವರಿಗೆ ಉತ್ತರ ಕೊಡುವುದಕ್ಕೆ ಬರುತ್ತದೆ. ಹೀಗಾಗಿ ನಾನು ಏನನ್ನೂ ಹೇಳುವುದಿಲ್ಲ. ಸುಮಲತಾ ಅವರು ಹೇಳಿದ್ದಾರೆ. ಅಷ್ಟು ಸಾಕು. ನಾವು ಮೈತ್ರಿಯ ದಾರಿಯಲ್ಲಿ ಹೋಗುತ್ತೇವೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *