ಹಿಜಬ್-ಕೇಸರಿ ವಿವಾದ – ಉಡುಪಿ, ಶಿವಮೊಗ್ಗದ ಕೆಲ ಕಾಲೇಜ್‍ಗಳಿಗೆ ರಜೆ ಘೋಷಣೆ

ಉಡುಪಿ/ಶಿವಮೊಗ್ಗ: ಹಿಜಬ್-ಕೇಸರಿ ವಿವಾದದ ನಡುವೆ ಹೈಕೋರ್ಟ್ ಆದೇಶ ಮೇಲೆ ಪಿಯುಸಿ, ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿತು. ಆದರೆ ಇತ್ತ ಉಡುಪಿ ಮತ್ತು ಶಿವಮೊಗ್ಗದ ಕೆಲ ಕಾಲೇಜ್‍ಗಳ ಆಡಳಿತ ಮಂಡಳಿ ನಿರ್ಧಾರದಂತೆ ಕಾಲೇಜ್‍ಗೆ ರಜೆ ಘೋಷಿಸಲಾಗಿದೆ.

ಹಿಜಬ್-ಕೇಸರಿ ವಿವಾದ ಹೈಕೋರ್ಟ್‍ನಲ್ಲಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯಲು ಮುಂದಾಗಿತ್ತು. ಅಲ್ಲದೇ ಸರ್ಕಾರದ ಆದೇಶ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಸಂದೇಶ ಕೂಡ ಶಾಲಾ-ಕಾಲೇಜುಗಳಿಗೆ ನೀಡಿತ್ತು. ಆದರೆ ರಾಜ್ಯದ ಕೆಲ ಶಾಲಾ-ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿಯೇ ಬಂದಿರುವುದು ಕಂಡುಬಂತು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

ಉಡುಪಿಯಲ್ಲಿ ಆರಂಭವಾದ ಹಿಜಬ್ ಗಲಾಟೆ ರಾಜ್ಯದ್ಯಾಂತ ಹಬ್ಬಿದೆ. ಈ ನಡುವೆ ಉಡುಪಿಯಲ್ಲಿ ಮತ್ತೆ ಗೊಂದಲ ಜಟಾಪಟಿಗೆ ಅವಕಾಶ ಕೊಡದಿರಲು ನಿರ್ಧರಿಸಿ ನಗರದ ಎಂಜಿಎಂ ಪಿಯು ಕಾಲೇಜ್‍ಗೆ ಇನ್ನೆರಡು ದಿನ ರಜೆ ನೀಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ಕಾಲೇಜ್‍ಗೆ ರಜೆ ಘೋಷಿಸಿ ಉಪನ್ಯಾಸಕರು ಆನ್‍ಲೈನ್ ಕ್ಲಾಸ್ ಮುಂದುವರಿಸಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮಾತ್ರ ಕಾಲೇಜ್‍ನಲ್ಲಿ ಮಾಡಲು ಎಂಜಿಎಂ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದನ್ನೂ ಓದಿ: ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

ಇತ್ತ ಶಿವಮೊಗ್ಗದಲ್ಲೂ ಕೂಡ ಮುಂಜಾಗ್ರತಾ ಕ್ರಮವಾಗಿ ಮೂರು ಕಾಲೇಜ್‍ಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‍ಗೆ ರಜೆ ಘೋಷಿಸಿರುವ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ 200 ಮೀ. ವ್ಯಾಪ್ತಿಯಲ್ಲಿ 4 ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. ಜಿಲ್ಲೆಯ ಬಹುತೇಕ ಕಾಲೇಜ್‍ಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

Comments

Leave a Reply

Your email address will not be published. Required fields are marked *