ವಿದ್ಯಾರ್ಥಿಗಳ ಎದುರೇ ಬೆಂಗಳೂರು ಹೈಸ್ಕೂಲ್ ಪ್ರಾಂಶುಪಾಲರ ಬರ್ಬರ ಹತ್ಯೆ!

ಬೆಂಗಳೂರು: ಶಾಲೆಯಲ್ಲಿ ವಿಶೇಷ ತರಗತಿ ನಡೆಸುತ್ತಿದ್ದ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳ ಎದುರೇ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಗರದ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದೆ.

ಇಂದು ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ವೇಳೆ ತರಗತಿ ಪ್ರವೇಶ ಮಾಡಿದ 5 ಮಂದಿ ದುಷ್ಕರ್ಮಿಗಳು ಏಕಾಏಕಿ ಸುಮಾರು 7 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ರಂಗನಾಥ ಕೊಲೆಯಾದ ಪ್ರಾಂಶುಪಾಲರಾಗಿದ್ದು, ಶಾಲೆಯಲ್ಲಿ ಸೆಕ್ಯುರಿಟಿ ವ್ಯವಸ್ಥೆ ಇದ್ದರೂ ಕೂಡ ಕೊಲೆ ಮಾಡಲಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಎದುರೇ ಕೊಲೆ ಮಾಡಿರುವುದಿಂದ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ದುಷ್ಕರ್ಮಿಗಳು ತರಗತಿಗೆ ನುಗ್ಗಿ ಪ್ರಾಂಶುಪಾಲರ ಮೇಲೆ ದಾಳಿ ನಡೆಸಿದ ವೇಳೆ ವಿದ್ಯಾರ್ಥಿಗಳು ಚೀರಾಟ ನಡೆಸಿದ್ದು, ಶಾಲೆಯಿಂದ ಕೇಳಿಬಂದ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಆ ವೇಳೆಗೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸಾರ್ವಜನಿಕರ ನೀಡಿದ ಮಾಹಿತಿ ಮೇರೆಗೆ ಮಾಗಡಿ ರಸ್ತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ದುಷ್ಕರ್ಮಿಗಳು ಶಾಲೆಯ ಒಳ ಪ್ರವೇಶ ಮಾಡಿರುವ ದೃಶ್ಯಗಳು ಶಾಲೆಯ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದ್ದು, ಪೊಲೀಸರು ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಕೊಲೆ ಹಿಂದಿನ ಕಾರಣ ತಿಳಿಯಲು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *