ಹೈಕಮಾಂಡ್ ತಲುಪಿದ ಸಚಿವಕಾಂಕ್ಷಿಗಳ ಪಟ್ಟಿ- ಬುಧವಾರ ಸಂಪುಟ ವಿಸ್ತರಣೆ?

ನವದೆಹಲಿ: ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಘಟ್ಟ ತಲುಪಿದೆ. ದಾವೋಸ್ ಪ್ರವಾಸದಿಂದ ವಾಪಸಾದ ಬಳಿಕ ಸಿಎಂ ಬಿ.ಎಸ್ ಯಡಿಯೂರಪ್ಪ ನೂತನ ಸಚಿವರ ಪಟ್ಟಿಯನ್ನ ಹೈಕಮಾಂಡ್‍ಗೆ ರವಾನಿಸಿದ್ದಾರೆ.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಜೊತೆಗೆ ಮಾತುಕತೆ ಬಳಿಕ ಅವರ ಮೂಲಕವೇ ಪಟ್ಟಿ ಈಗ ವರಿಷ್ಠರ ಕೈ ತಲುಪಿದೆ. ಇಂದು ಈ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಪರಿಶೀಲನೆ ನಡೆಸಲಿದ್ದು, ಅಂತಿಮ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಹೈಕಮಾಂಡ್ ಪಟ್ಟಿಗೂ ಬಿಎಸ್‍ವೈ ಪಟ್ಟಿಗೂ ತಾಳೆ ಹಾಕಲಿರುವ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ಅತ್ಯಂತ ಕುತೂಹಲ ಮೂಡಿಸಿದೆ. ಇದರಿಂದ ಸಚಿವಕಾಂಕ್ಷಿಗಳ ಎದೆಬಡಿತ ಜೋರಾಗಿಸಿದೆ.

ಮಾಹಿತಿ ಪ್ರಕಾರ ನೂತನವಾಗಿ ಆಯ್ಕೆಯಾಗಿರುವ ಶಾಸಕರ ಪೈಕಿ ಹತ್ತು ಮಂದಿ ಶಾಸಕರ ಹೆಸರು ಸಿಎಂ ಯಡಿಯೂರಪ್ಪ ನಮೋದಿಸಿದ್ದಾರೆ. ಅವರಲ್ಲಿ ಹೈಕಮಾಂಡ್ ಕನಿಷ್ಠ 9 ಒಂಭತ್ತು ಮಂದಿಯನ್ನು ಫೈನಲ್ ಮಾಡುವ ಲೆಕ್ಕಚಾರದಲ್ಲಿದ್ದಾರೆ. ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ನಿಗಮ ಮಂಡಳಿ ನೀಡುವ ಬಗ್ಗೆ ಚಿಂತನೆ ಮಾಡಿದ್ದು, 9+3 ಫಾರ್ಮುಲದಲ್ಲಿ ಮೂವರು ಮೂಲ ಬಿಜೆಪಿ ನಾಯಕರಿಗೂ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ಸಂಜೆ ವೇಳೆ ಬಹುತೇಕ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದ್ದು, ಬಹುತೇಕ ಬುಧವಾರ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಇಂದು ಪಟ್ಟಿ ಫೈನಲ್ ಆಗದಿದ್ದಲ್ಲಿ ಮತ್ತಷ್ಟು ವಿಳಂಬವಾಗಲಿದೆ. ವರಿಷ್ಠರು ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆಗೆ ಕೈ ಹಾಕುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *