ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಧರೆಗುರುಳಿದ ಮರ, ಕುಸಿದ ಗುಡ್ಡ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿಗರು ತತ್ತರಿಸಿದ್ದಾರೆ. ಇತ್ತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಬೃಹತ್ ಮರಗಳು, ರಸ್ತೆ ಬದಿಯ ಗುಡ್ಡಗಳು ಧರೆಗುರುಳಿದ್ದು, ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರ ಹಾಂದಿ ಬಳಿ ಬೃಹತ್ ಮರವೊಂದು ರಸ್ತೆ ಬಿದ್ದ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಡ್ಡ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾನುವಾರವಾದ್ದರಿಂದ ಸಾವಿರಾರು ಪ್ರವಾಸಿಗರು ಗಿರಿಭಾಗ ಮತ್ತು ದತ್ತಪೀಠಕ್ಕೆ ಬಂದಿದ್ದರು. ಆದರೆ ಮಾರ್ಗ ಮಧ್ಯೆ ಅಂದರೆ ಚಿಕ್ಕಮಗಳೂರಿನ ಕೈಮರ ಸಮೀಪ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ಗಿರಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಮತ್ತು ಸ್ಥಳಿಯರು ಪರದಾಟ ಮಾಡಿದ್ದಾರೆ.

ಕುದುರೆಮುಖ, ಕಳಸದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಕಳೆದ 40 ದಿನದಲ್ಲಿ 12 ಬಾರಿ ಮುಳುಗಿರುವ ಈ ಸೇತುವೆ ಇದೀಗ 13ನೇ ಬಾರಿ ಮುಳುಗುವ ಸಾಧ್ಯತೆ ಇದೆ. ಭದ್ರೆಯ ಒಡಲಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಹೇರೂರು ಬಳಿಯೂ ಗುಡ್ಡ ಕುಸಿದಿದ್ದು, ಹೇರೂರು-ಬಸರಿಕಟ್ಟೆ ಮಾರ್ಗ ಕೂಡ ಬಂದ್ ಆಗಿದೆ. ಇತ್ತ ಸುರಿಯುತ್ತಿರುವ ಮಳೆ ಕಾರ್ಯಚರಣೆಗೂ ಅಡ್ಡಿಯುಂಟು ಮಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *