ಬಿರುಗಾಳಿ ಸಹಿತ ಮಳೆ – ಹಲವೆಡೆ ಹಾರಿ ಹೋಯ್ತು ಸಂಪೂರ್ಣ ಮೇಲ್ಛಾವಣಿ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅವಘಡಗಳು ಸಂಭವಿಸಿವೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಭಾರೀ ಗಾಳಿ ಮಳೆಗೆ ಸುಜಯ್ ಎಂಬವರ ಮನೆ ಮೇಲ್ಛಾವಣಿ ಸಂಪೂರ್ಣ ಹಾರಿಹೋಗಿದೆ. ಅಷ್ಟೇ ಅಲ್ಲದೇ ಮೇಲ್ಛಾವಣಿಯ ಸೀಟುಗಳು ಮಹಿಳೆ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಪ್ರಜೀದಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಮಹಿಳೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಪ್ರೇಮಿ, ಬೇಬಿ, ಚಂದ್ರ ಎಂಬವರ ಮನೆಯ ಮೇಲ್ಛಾವಣಿಗಳು ಸಂಪೂರ್ಣ ಹಾರಿ ಹೋಗಿದ್ದು, ಭಾರೀ ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದ್ದು, 30ಕ್ಕೂ ಹೆಚ್ಚು ಶೀಟು ಹಾರಿ ಹೋಗಿವೆ. ಶಾಲೆಗೆ ರಜೆ ಇದ್ದುದರಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ.

ಕಳದ ದಿನ ಕಾಫಿನಾಡ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ 20 ಕೆ.ಜಿ.ತೂಕದ ಒಂದು ಆಲಿಕಲ್ಲು ಬಿದ್ದಿದ್ದವು. ಸುಮಾರು ಒಂದು ಗಂಟೆಯ ಕಾಲ ಸುರಿದ ಭಾರೀ ಮಳೆಗೆ ಮನೆಯ ಆವರಣದ ತುಂಬೆಲ್ಲಾ ಮಲ್ಲಿಗೆ ಹೂ ಬಿದ್ದಂತೆ ಆಲಿಕಲ್ಲು ಬಿದ್ದಿತ್ತು. ಕಳೆದ ಎರಡು ತಿಂಗಳ ಭೀಕರ ರಣಬಿಸಿಲಿಗೆ ಹೈರಾಣಾಗಿದ್ದ ಮಲೆನಾಡಿಗರಿಗೆ ಈ ಮಳೆ ಸಂತಸ ತಂದಿತ್ತು. ಜೊತೆಗೆ ಮಲೆನಾಡಿನ ಜನ ಆ ಆಲಿಕಲ್ಲುಗಳನ್ನ ಪಾತ್ರೆ-ಲೋಟಗಳಲ್ಲಿ ತುಂಬಿ ಖುಷಿ ಪಟ್ಟಿದ್ದರು.

Comments

Leave a Reply

Your email address will not be published. Required fields are marked *