ಆಲಿಕಲ್ಲು ಮಳೆಗೆ ತಿಪ್ಪೆ ಸೇರಿದ ದ್ರಾಕ್ಷಿ ಬೆಳೆ – ಸಂಕಷ್ಟದಲ್ಲಿ ಅನ್ನದಾತ

ಚಿಕ್ಕಬಳ್ಳಾಪುರ: ಮಾರ್ಕೆಟ್‍ನಲ್ಲಿ ಮಾರಾಟವಾಗಿ ಬೆಳೆಗಾರರ ಬದುಕು ಹಸನು ಮಾಡಬೇಕಿದ್ದ ದ್ರಾಕ್ಷಿ ಮಣ್ಣುಪಾಲಾಗಿದೆ. ಉದುರಿಬಿದ್ದಿರುವ ದ್ರಾಕ್ಷಿ ಹಣ್ಣೆಲ್ಲ ತಿಪ್ಪೆಗುಂಡಿ ಪಾಲಾಗ್ತಿದೆ. ಇದು ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆ ಸೃಷ್ಟಿಸಿದ ಅವಾಂತರ.

ಚಿಕ್ಕಬಳ್ಳಾಪುರದ ರೈತ ಸುಬ್ಬರಾಯಪ್ಪ 20 ಗುಂಟೆಯಲ್ಲಿ ಬೆಳೆದಿದ್ದ ದ್ರಾಕ್ಷಿ ಈಗ ಸರ್ವನಾಶವಾಗಿದೆ. ಒಳ್ಳೆಯ ಇಳುವರಿ ಬಂದರೂ ದ್ರಾಕ್ಷಿ ಕೊಯ್ಯೋಕೆ ಯಾರೂ ಬರ್ತಿಲ್ಲ. ಇದರ ಜೊತೆಗೆ ಇದೇ ತಿಂಗಳ 31ರೊಳಗೆ ಬಾಕಿ ಸಾಲ ಕಟ್ಟುವಂತೆ ಪಿಎಲ್‍ಡಿ ಬ್ಯಾಂಕಿನಿಂದ ನೋಟಿಸ್ ಬಂದಿದೆ. ಆದ್ರೆ ಎಲ್ಲಿಂದ ಕಟ್ಟೋದು, ಏನ್ ಮಾಡೋದು, ಸಾಯೋದು ಒಂದಷ್ಟೇ ನಮಗೆ ಇರೋ ದಾರಿ ಅಂತಾ ಕಣ್ಣೀರು ಸುರಿಸ್ತಾರೆ ಸುಬ್ಬರಾಯಪ್ಪ.

ಇತ್ತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ, ಗುಮ್ಮಗೋಳ, ಬಿದರಳ್ಳಿಯಲ್ಲಿ ಮಳೆ ಸಾಕಷ್ಟು ಹಾನಿ ಮಾಡಿದೆ. ಭತ್ತದ ಬೆಳೆ ನೆಲಕಚ್ಚಿದ್ದು, ಮನೆಗಳ ಮೇಲ್ಛಾವಣಿ, ಗೋಣಿಬಸವೇಶ್ವರ ದೇವಸ್ಥಾನದ ಕಳಸ ಹಾರಿ ಹೋಗಿದೆ. ಬಿಡನಾಳದಲ್ಲಿ ಎತ್ತು, ಗುಮ್ಮಗೋಳದಲ್ಲಿ ಹಸು ಸಿಡಿಲು ಬಡಿದು ಸಾವನ್ನಪ್ಪಿದೆ.

ಯಾದಗಿರಿ ಜಿಲ್ಲೆಯ ಹಳಗೇರಾದಲ್ಲಿ ಸಿಡಿಲು ಬಡಿದು 20 ಕುರಿಗಳು ಸಾವನ್ನಪ್ಪಿವೆ. ಸಗರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮನೆಗಳ ಛಾವಣಿ ಹಾರಿಹೋಗಿದೆ.

ಧಾರವಾಡದಲ್ಲಿ ಗುರುವಾರ ಒಂದು ಗಂಟೆಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿಯಿತು. ಬಿರುಗಾಳಿ ಸಹಿತ ವರ್ಷಧಾರೆಗೆ ಮರಗಳು ಉರುಳಿಬಿದ್ದ ವಾಹನಗಳು ಜಖಂ ಆಗಿವೆ.

Comments

Leave a Reply

Your email address will not be published. Required fields are marked *