ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

ಬೆಂಗಳೂರು: ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದ್ದು, ಸೂರ್ಯ ಮರೆಯಾಗುತ್ತಿದ್ದಾನೆ. ಮೈ ಕೊರೆಯುವ ಚಳಿ ಆರಂಭವಾಗುವ ಟೈಂನಲ್ಲಿ ವರ್ಷ ಪೂರ್ತಿ ವರ್ಷಧಾರೆಯ ಸಿಂಚನ. ವಾತಾವರಣ ಈ ಪರಿ ಬದಲಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆಲ್ಲ ವಿಜ್ಞಾನಿಗಳು ಬೆಚ್ಚಿಬೀಳುವ ಕಾರಣ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯದ ಹಿಂದೆ ಅರಬ್ಬೀ, ಬಂಗಾಳಕೊಲ್ಲಿಯ ಸಮುದ್ರಾಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭೂಕಂಪ ಸೃಷ್ಟಿಯಾಗುತ್ತಿದ್ದು, ಇದು ಪ್ರಾಕೃತಿಕ ಬದಲಾವಣೆಗೂ ಕಾರಣವಾಗಿದೆ. ಹಾಗಾಗಿಯೇ ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ಇದು ತುಂಬಾ ಡೇಂಜರಸ್ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.

ಪ್ರಕಾಶ್, ಭೂ ಗರ್ಭ ತಜ್ಞ

ಅರಬ್ಬೀ ಸಮುದ್ರದಲ್ಲಿ ಸ್ಫೋಟಿಸಿದ ಮೂರು ಭೂಕಂಪಗಳು ಬೆಂಗಳೂರಿನಲ್ಲಿ ಈ ವಿಚಿತ್ರ ವಾತಾವರಣವನ್ನು ಸೃಷ್ಟಿಸಿದೆ. ಆತಂಕದ ವಿಚಾರ ಎಂದರೆ ಸಮುದ್ರಾಳದ ಸ್ಫೋಟದ ತೀವ್ರತೆಯ ಪ್ರಮಾಣ ಅಪಾಯದ ಮಟ್ಟ ಮೀರಿದ್ದು ಇದು ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದೇ ರೀತಿ ಪದೇ ಪದೇ ಸಮುದ್ರಾಳದಲ್ಲಿ ಜ್ವಾಲಾಮುಖಿ ಮುನಿಸಿಕೊಂಡರೆ ಬೆಂಗಳೂರಿಗೆ ಇನ್ನಷ್ಟು ಅಪಾಯ ಕಾಡುವ ಸಾಧ್ಯತೆಗಳಿವೆ. ಮಳೆಯ ಅಬ್ಬರ, ವಾತಾವರಣ ಏರುಪೇರಿನಿಂದ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅದೆಲ್ಲೋ ಅಪರೂಪಕ್ಕೆ ಈ ರೀತಿ ಜ್ವಾಲಮುಖಿ ಸ್ಫೋಟಗೊಳ್ಳುತ್ತಿತ್ತು. ಆದರೆ ಈಗ ಪದೇ ಪದೇ ಈ ರೀತಿಯ ಸ್ಫೋಟ ಡೇಂಜರಸ್ ಎಂದು ಹೇಳಲಾಗುತ್ತಿದೆ. ಕಾಲ್ಸ್ ಬರ್ಗ್ ರಿಡ್ಜ್ ಎನ್ನುವ ಜ್ವಾಲಾಮುಖಿಗಳು ಈ ಮಳೆಗೆ ಕಾರಣವಾಗಿದ್ದು, ಇದು ಭಾರತದಲ್ಲಿ ಭೂಕಂಪದಂತಹ ಅಪಾಯವನ್ನು ತಂದೊಡ್ಡಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಭೂಮಿಯಲ್ಲಿ ನಮಗರಿವಿಲ್ಲದಂತೆ ಆಗುವ ಬದಲಾವಣೆ ಇದೀಗ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಿದೆ. ಮೊದಲೇ ನೆರೆಯ ಅಬ್ಬರದಲ್ಲಿ ಮುಳುಗಿದ ಕರುನಾಡಿಗೆ ಮಗದೊಂದು ಅಪಾಯದ ಸೂಚನೆ ಭೀತಿ ಹುಟ್ಟಿಸಿದೆ.

Comments

Leave a Reply

Your email address will not be published. Required fields are marked *