800 ಅಡಿ ಆಳಕ್ಕೆ ಬಿದ್ದು ಮರದ ರೆಂಬೆಗಳ ಮಧ್ಯೆ ಸಿಲುಕಿದ್ದ ತುಂಬು ಗರ್ಭಿಣಿಯ ರಕ್ಷಣೆ

ಮುಂಬೈ: 25 ವರ್ಷದ ತುಂಬು ಗರ್ಭಿಣಿಯೊಬ್ಬರು 800 ಅಡಿ ಆಳದ ಕಂದಕಕ್ಕೆ ಬಿದ್ದ ಅಘಾತಕಾರಿ ಘಟನೆಯೊಂದು ಇಲ್ಲಿನ ಮಾಥೆರಾನ್ ಎಂಬಲ್ಲಿ ನಡೆದಿದೆ.

ಈ ಘಟನೆ ಭಾನುವಾರ ನಡೆದಿದ್ದು, ಘಟನೆ ನಡೆದ ಕೂಡಲೇ ಗರ್ಭಿಣಿ ವಿಜಯ ಪವಾರ್ ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಾಯಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏನಿದು ಘಟನೆ?: ಭಾನುವಾರ ವಿಜಯ ಪವಾರ್ ಅವರು ತನ್ನ ಪತಿ ಜೊತೆ ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಸುಮಾರು 800 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ವಿಜಯ ಅವರು ಮರದ ರೆಂಬೆಗಳ ಮಧ್ಯೆ ಸಿಲುಕಿಕೊಂಡು ಒದ್ದಾಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ, ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅಲ್ಲಿಂದ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ತಾಯಿ-ಮಗು ಇಬ್ಬರೂ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

ಮುಂಬೈನ ಚರ್ಚ್ ಗೇಟ್ ನಿವಾಸಿಯಾಗಳಾಗಿರುವ ಈ ದಂಪತಿ 9 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ವಿಜಯ ಅವರು 6 ತಿಂಗಳ ಗರ್ಭಿಣಿಯಾಗಿದ್ದು, ಪತಿ ಸುರೇಶ್ ಜೊತೆ ಸ್ಥಳೀಯ ಗಣಪತಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ದೇವಸ್ಥಾನ ಸ್ವಲ್ಪ ಎತ್ತರ ಪ್ರದೇಶದಲ್ಲಿರುವುದರಿಂದ ದಂಪತಿ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವಿಜಯ ಕಂದಕಕ್ಕೆ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಅಂದ್ರೆ 2.15ರ ಸುಮಾರಿಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಇತ್ತ ಮರದ ರೆಂಬೆಗಳ ಮಧ್ಯೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಿಜಯ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರೆ, ಮಗು ಅಪಾಯದಿಂದ ಪಾರಾಗಿದೆ ಅಂತ ನೆರಲ್ ನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಿವಾಜಿ ಧವಾಲೆ ಅವರು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಘಟನೆ ಸಂಬಂಧಿಸಿದಂತೆ ಪೊಲೀಸರು, ಘಟನೆಯ ಹಿಂದೆ ಪತಿಯ ಕೈವಾಡವಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾಕಂದ್ರೆ ವಿಜಯ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪತಿ ತನ್ನನ್ನು ತಳ್ಳಿರುವುದಾಗಿ ಹೇಳಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಆಕಸ್ಮಿಕವಾಗಿ ಬಿದ್ದಿರುವುದಾಗಿ ಅವರು ಹೇಳಿದ್ದಾರೆ ಅಂತ ಮಾಹಿತಿಯೊಂದು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪತಿಯನ್ನು ತನಿಖೆ ನಡೆಸುತ್ತಿದ್ದು, ಪತಿ ವಿರುದ್ಧ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *