ಲಾಟರಿ, ಇಸ್ಪೀಟ್ ದಂಧೆ ಹಣದಲ್ಲಿ ಸರ್ಕಾರ ಬೀಳಿಸಲು ಯತ್ನ: ಸಿಎಂ ಎಚ್‍ಡಿಕೆ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಲಾಟರಿ ಹಾಗೂ ಇಸ್ಪೀಟ್ ದಂಧೆಯ ಹಣದಲ್ಲಿ ಪ್ರಯತ್ನ ನಡೆಸಲಾಗುತ್ತಿದ್ದು, ಎಲ್ಲವೂ ನನಗೆ ಗೊತ್ತಿದೆ. ಸರ್ಕಾರ ಉಳಿಸಲು ಬೇಕಾದ ಕ್ರಮ ನಾನು ಮಾಡುತ್ತಿದ್ದು, ಸುಮ್ಮನೆ ಕುಳಿತಿಲ್ಲ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಲಾಟರಿ ಹಾಗೂ ಇಸ್ಪೀಟ್ ದಂಧೆಯಲ್ಲಿ ತೊಡಗಿರುವ ಕಿಂಗ್ ಪಿನ್ ಗಳು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿರುವವರೊಂದಿಗೆ ಸೇರಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆಯೂ ನಮಗೇ ಮಾಹಿತಿ ಇದೆ. ಆದರೆ ಸರ್ಕಾರ ಉಳಿಸಲು ಬೇಕಾದ ಪ್ರಯತ್ನವನ್ನು ನಾನು ಖಂಡಿತ ಮಾಡುತ್ತಿದ್ದು, ಸುಮ್ಮನೆ ಕುಳಿತ್ತಿಲ್ಲ ಎಂದರು.

ಇದೇ ವೇಳೆ ತಮ್ಮ ಆರೋಪಕ್ಕೆ ಹಲವು ಉದಾಹರಣೆ ಸಮೇತ ಮಾಹಿತಿ ನೀಡಿದ ಸಿಎಂ, 2009-10 ರಲ್ಲಿ ಬಿಬಿಎಂಪಿ ಕಡತದ ಕಚೇರಿಗೆ ಬೆಂಕಿ ಇಟ್ಟ ಪ್ರಮುಖ ಕಿಂಗ್ ಪಿನ್ ಯಾರು? ಸಕಲೇಶಪುರದಲ್ಲಿ ಕಾಫಿ ರೆಸಾರ್ಟ್ ಮಾಡಲು ಯತ್ನಿಸಿ ಸ್ವತಃ ಕುಟುಂಬವನ್ನು ಕೊಲೆ ಮಾಡಿದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣದ ಹಿಂದಿನ ಕಿಂಗ್ ಪಿನ್ ಯಾರು? ಇಲ್ಲಿ ಪ್ರತಿನಿತ್ಯ ಇಸ್ಪೀಟ್ ದಂಧೆ ನಡೆಸಿ ನಿತ್ಯ ಕೋಟ್ಯಾಂತರ ರೂಪಾಯಿ ಸಂಗ್ರಹಿಸುವ ಕಿಂಗ್ ಪಿನ್ ಯಾರು ಎನ್ನುವ ಮಾಹಿತಿ ಬಗ್ಗೆ ನನಗೆ ತಿಳಿದಿದೆ. ಈ ಹಣದಲ್ಲಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

ಇದೇ ವೇಳೆ ಸರ್ಕಾರ ಹಲವು ಶಾಸಕರಿಗೆ ಹಣದ ಅಮಿಷ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಡ್ವಾನ್ಸ್ ಹಣವನ್ನು ನೀಡಲಾಗುತ್ತಿದೆ. ಎಲ್ಲವೂ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸರ್ಕಾರ ಉರುಳಿಸಿ ರೆಸಾರ್ಟ್ ರಾಜಕೀಯ ಆರಂಭಿಸಿದರು ಯಾವುದೇ ಚಿಂತೆ ಇಲ್ಲ. ಆದರೆ ಸದ್ಯ ನನಗೆ ಸಿಎಂ ಆಗಿ ಕಾರ್ಯನಿರ್ವಹಿಸಲು ಯಾರ ಅಡ್ಡಿಯೂ ಇಲ್ಲ. ಸಮ್ಮಿಶ್ರ ಸರ್ಕಾರದ ಎಲ್ಲ ಸಚಿವರು, ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯ ಅಭಿವೃದ್ಧಿ ಕಡೆಗೆ ಮಾತ್ರ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ, ಸರ್ಕಾರದ ಒಳಗಿನ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಸಿಎಂ ಎಚ್‍ಡಿಕೆ ಈ ರೀತಿ ಆರೋಪ ಮಾಡಿದ್ದಾರೆ. ಆದರೆ ನಮ್ಮ ಪಕ್ಷ ಕೆಲವು ಸಿದ್ಧಾಂತಗಳನ್ನ ಹೊಂದಿದೆ. ಕುಟುಂಬದ ಅಭಿವೃದ್ಧಿ ಮಾಡುವ ಪಕ್ಷ ನಮ್ಮದಲ್ಲ. ಪ್ರತಿ ಚುನಾವಣೆ ವೇಳೆ ಯಾರು ಎಷ್ಟು ಹಣ ಪಡೆಯುತ್ತಾರೆ ಎಂಬುವುದು ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *