ನಿವೃತ್ತ ಅಧಿಕಾರಿಯ ಸಂಧಾನದಿಂದಾಗಿ ರೇವಣ್ಣರ `ಎರಡು ಕನಸು’ ಭಗ್ನ!

ಬೆಂಗಳೂರು: ನಿವೃತ್ತ ಅಧಿಕಾರಿಯೊಬ್ಬರ ಮಾತು ಕೇಳಿ ಎಚ್ ಡಿ ರೇವಣ್ಣ ಅವರು ಇಂಧನ ಸಚಿವ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟಿದ್ದಾರೆ.

ಹೌದು. ಸೋಮವಾರ ಮೂರು ಗಂಟೆಗಳ ಕಾಲ ದೇವೇಗೌಡ, ರೇವಣ್ಣ ಮತ್ತು ನಿವೃತ್ತ ಅಧಿಕಾರಿ ನಡುವೆ ಮಾತುಕತೆ ನಡೆದಿದೆ. ಈ ಮಾತುಕತೆಯ ವೇಳೆ ನಿವೃತ್ತ ಅಧಿಕಾರಿಯ ಮಾತಿಗೆ ಒಪ್ಪಿ ರೇವಣ್ಣ ಇಂಧನ ಖಾತೆಯಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಕುಟುಂಬದ ನಂಬಿಕಸ್ಥ ವ್ಯಕ್ತಿಯಾಗಿರುವ ನಿವೃತ್ತ ಅಧಿಕಾರಿ, ದೇವೇಗೌಡರ ಆಪ್ತರು ಕೂಡ ಆಗಿದ್ದು, ಎಚ್‍ಡಿಡಿ ಕುಟುಂಬದ ಜತೆ ಪ್ರತಿ ಹಂತದಲ್ಲೂ ಜತೆಗಿದ್ದರು. ಹೀಗಾಗಿ ರೇವಣ್ಣ ಅವರು ಯಾವಾಗಲೂ ಆ ನಿವೃತ್ತ, ನಂಬಿಕಸ್ಥ ಅಧಿಕಾರಿಯ ಮಾತು ಕೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಎಚ್ ಡಿ ರೇವಣ್ಣ ಅವರು ನಿವೃತ್ತ ಅಧಿಕಾರಿಯ ಕಿವಿಮಾತನ್ನು ಕೇಳಿದ್ದಾರೆ.

ಮೂವರ ಮಧ್ಯೆ ಸುದೀರ್ಘ ಮಾತುಕತೆ ನಡೆದ ನಂತರ ದೇವೇಗೌಡರ ಮುಂದೆಯೇ ಇಂಧನ ಖಾತೆ ಬಿಟ್ಟುಕೊಡಲು ರೇವಣ್ಣ ಒಪ್ಪಿದ್ದಾರೆ. ಸಂಧಾನ ಮಾತುಕತೆಯ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಇಂಧನ ಖಾತೆ ನನಗೆ ಬೇಕೆಂದು ಪಟ್ಟು ಹಿಡಿದಿದ್ದ ರೇವಣ್ಣ, ನನಗೆ ಇಂಧನ ಖಾತೆ ನನಗೆ ಬೇಡ, ಲೋಕೋಪಯೋಗಿ ಸಾಕು ಎಂದು ಹೇಳಿದಾಗ ಸಹೋದರ ಎಚ್‍ಡಿಕೆ ಆಶ್ಚರ್ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *