ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ: ಎಚ್‍ಡಿಡಿ

– 87 ವರ್ಷ ವಯಸ್ಸಾದರೂ ರಾಜ್ಯ ಸುತ್ತುತ್ತೇನೆ
– ಯಾರೋ ಪಕ್ಷದಿಂದ ಹೊರ ಹೋದರೆ ನಷ್ಟವಿಲ್ಲ ಜಿಟಿಡಿಗೆ ಟಾಂಗ್

ಹಾಸನ: 1989ರಲ್ಲಿ ಎಲ್ಲರೂ ಒದ್ದರು, ನಾನೊಬ್ಬನೇ ಎದ್ದೆ. ಆಗ ಮತ್ತೆ ಪಕ್ಷ ಕಟ್ಟಲಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮತ್ತೆ ಪಕ್ಷ ಕಟ್ಟುವ ಮಾತುಗಳನ್ನಾಡಿದ್ದಾರೆ.

ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1989ರಲ್ಲಿ ಎಲ್ಲರೂ ಒದ್ದರು ಆಗ ನಾನೊಬ್ಬನೇ ಎದ್ದೆ ಆಗ ಬಿ.ಎಲ್.ಶಂಕರ್, ವೈ.ಎಸ್.ವಿ.ದತ್ತ, ಉಗ್ರಪ್ಪ ಮಾತ್ರ ಜೊತೆಗಿದ್ದರು. ಮತ್ತೆ ಪಕ್ಷ ಕಟ್ಟಲಿಲ್ಲವೇ? ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಜೆಡಿಎಸ್‍ಗೆ ಕರೆತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್,ಡಿ,ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ನನಗೂ ತಿಳಿಸಿದ್ದಾರೆ. ಸದ್ಯದಲ್ಲೇ ಇದು ಪರಿಪೂರ್ಣವಾಗಲಿದೆ ಎಂದರು.

ಜಿ.ಟಿ.ದೇವೇಗೌಡ ಬಿಜೆಪಿಗೆ ಹೋದರು, ಮಂತ್ರಿಯಾದರು ಮತ್ತೆ ಈಗ ಬಿಜೆಪಿಗೆ ಹೋಗುತ್ತಿದ್ದಾರೆ. ಯಾರೋ ಒಬ್ಬರು ಇಬ್ಬರು ಪಕ್ಷದಿಂದ ಹೊರ ಹೋದರೆ ಪಕ್ಷಕ್ಕೆ ನಷ್ಟವಿಲ್ಲ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ. ಕೆ.ಆರ್.ಪೇಟೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಅಲ್ಲಿಗೆ ಹೋಗಿದ್ದೆ. ತಾತ ಮತ್ತು ಮೊಮ್ಮಗ ಪಕ್ಷ ಕಟ್ಟಲು ಬಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ. ನಾನು ತಲೆ ಕೆಡಿಸಿಕೊಳ್ಳುಬುದಿಲ್ಲ ಎಂದರು.

ದೆಹಲಿಯ ಹಿಂಸಾಚಾರದಲ್ಲಿ ಇಂಟೆಲಿಜೆನ್ಸ್(ಗುಪ್ತಚರ ದಳ) ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಕಾಣುತ್ತಿದೆ ಎಂದು ಕೇಂದ್ರದ ವಿರುದ್ಧ ಎಚ್‍ಡಿಡಿ ಹರಿಹಾಯ್ದರು.

Comments

Leave a Reply

Your email address will not be published. Required fields are marked *