ಕೇಂದ್ರದ ಪರಿಹಾರ ಹೆಚ್‍ಡಿಕೆ ಅವಧಿಯಲ್ಲಾದ ನೆರೆ ನಷ್ಟಕ್ಕೆ ಹೊರತು ಈಗಿನ ನಷ್ಟಕ್ಕಲ್ಲ: ಹೆಚ್‍ಡಿಡಿ ಕಿಡಿ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ನೆರೆ ಪರಿಹಾರ ಹೆಸರಿನಲ್ಲಿ ಬಿಡುಗಡೆ ಮಾಡಿರೋದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಾದ ನೆರಯ ನಷ್ಟದ ಪರಿಹಾರ. ಈಗಿನ ನೆರೆ ನಷ್ಟಕ್ಕೆ ಕೇಂದ್ರ ನಯಾಪೈಸೆ ಕೂಡ ಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಿಡಿಕಾರಿದ್ದಾರೆ.

ಜಿಲ್ಲೆಯ ಚಿಂತಾಮಣಿ ತಾಲೂಕು ಶ್ರೀ ಕ್ಷೇತ್ರ ಕೈವಾರದಲ್ಲಿ ಚಿಂತಾಮಣಿ ಜೆಡಿಎಸ್ ಶಾಸಕ ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಜೆ.ಕೆ ಕೃಷ್ಣಾರೆಡ್ಡಿ ಅವರ 25ನೇ ವರ್ಷದ ವಾರ್ಷಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿ ಸುಮಾರು 38,000 ಸಾವಿರ ಕೋಟಿ ನಷ್ಟ ಉಂಟಾಗಿದ್ದದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈಗ ನೀಡಿರೋ 1,200 ಕೋಟಿ ರೂಪಾಯಿ ಪರಿಹಾರ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಕೊಡಗು, ಶಿವಮೊಗ್ಗ ಮತ್ತಿತರ ಕಡೆ ಉಂಟಾಗಿದ್ದ ನೆರೆ ಪರಿಹಾರದ ನಷ್ಟದ ಪರಿಹಾರವೇ ಹೊರತು ಈಗಿನ 38,000 ಸಾವಿರ ಕೋಟಿ ನಷ್ಟದ ಪರಿಹಾರ ಅಲ್ಲ ಎಂದು ಕಿಡಿಕಾರಿದರು. ಹಾಗೆಯೇ ಕೇಂದ್ರದ ಸಮರ್ಪಕ ಅನುದಾನಕ್ಕಾಗಿ ಇದೇ ತಿಂಗಳ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕಿನವರೆಗೆ ಸಾಂವಿಧಾನಿಕವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ವೇಳೆ ತಮ್ಮ ಗತಕಾಲದ ರಾಜಕೀಯ ಜೀವನವನ್ನ ಮೆಲುಕು ಹಾಕಿದ ದೇವೇಗೌಡರು, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಪಕ್ಷದಿಂದ ಹೊರಗೆ ಹಾಕಿದಾಗ, ಕೈವಾರ ಪುಣ್ಯಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂ.ಎಸ್.ರಾಮಯ್ಯ ಅವರು ರಾಜಕೀಯ ಅಭಿವೃದ್ಧಿಗೆ ಮಾಡಿದ ಆರ್ಥಿಕ ನೆರವನ್ನು ನೆನಸಿಕೊಂಡರು.

Comments

Leave a Reply

Your email address will not be published. Required fields are marked *