ಸೊಂಟ ಮುರಿದಿಲ್ಲ ಎಂದಿದ್ದ ಪರಮೇಶ್ವರ್ ಗೆ ದೇವೇಗೌಡರ ತಿರುಗೇಟು

ತುಮಕೂರು: ದೇವೇಗೌಡರ ಸೊಂಟದ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಗೆ ತವರೂರಿನಲ್ಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತಿರುಗೇಟು ಕೊಟ್ಟಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಎಚ್‍ಡಿ ದೇವೇಗೌಡರು ಪರಮೇಶ್ವರ ವಿರುದ್ಧ ಹರಿಹಾಯ್ದರು. ಕೆಪಿಸಿಸಿ ರಾಜ್ಯಾಧ್ಯಕ್ಷರು ಸೊಂಟ ಮುರಿದಿಲ್ಲ ಎಂದು ಹೇಳಿದ್ರು. ಆದ್ರೆ ನನ್ನ ಸೊಂಟ ಸರಿಯಾಗಿದೆ ಎಂದು ತೋರಿಸುವ ಸಲುವಾಗಿ ಎರಡು ಗಂಟೆಗಳ ಕಾಲ ಸಮಾವೇಶದಲ್ಲಿ ನಿಂತು ಬಂದೆ ಎಂದು ದೇವೇಗೌಡರು ಜಿ.ಪರಮೇಶ್ವರ್ ಗೆ ತಿರುಗೇಟು ನೀಡಿದ್ರು.

ಈ ಸಂದರ್ಭದಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸದ ದೇವೇಗೌಡರು, ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನನ್ನ ಸಹಾಯ ಕೇಳಿದ್ದರು. ನಾಡಿನ ಜನತೆಯ ಹಿತದಿಂದ 20 ವರ್ಷಗಳ ಬಳಿಕ ವಿಧಾನಸೌಧಕ್ಕೆ ಹೋಗಿ ಸಭೆಯಲ್ಲಿ ಪಾಲ್ಗೊಂಡೆ ಎಂದರು. ಕಾವೇರಿ ವಿವಾದ ಸುಪ್ರಿಂ ಕೋರ್ಟ್ ನಲಿದ್ದು ಮುಂದೇನಾಗಬಹುದು ಎಂದು ನಾನು ಗ್ರಹಿಸಿದ್ದೇನೆ ಎಂದು ಕಾವೇರಿ ತೀರ್ಪಿನ ಬಗ್ಗೆ ಸೂಚ್ಯವಾಗಿ ಹೇಳಿದರು.

ಕಳೆದ ಬಾರಿ ಮಂಡ್ಯದಲ್ಲಿ ಸಿಎಸ್ ಪುಟ್ಟರಾಜು ಸೋಲು, ರಾಮನಗರದಲ್ಲಿ ತಮ್ಮ ಸೊಸೆ ಸೋಲಿನ ಹೊಣೆಯನ್ನು ನಾವೇ ಹೊರುತ್ತೇವೆ ಎಂದ ದೇವೇಗೌಡರು, ರಾಜ್ಯದಲ್ಲಿ ಜೆಡಿಎಸ್ ಸತ್ತೆಹೋಯ್ತು ಎನ್ನುವ ಮುಖ್ಯಮಂತ್ರಿಗಳು ಕೊರಟಗೆರೆಯ ಇಂದಿನ ಕಾರ್ಯಕ್ರಮಕ್ಕೆ ಬಂದು ನೋಡಲಿ ಎಂದು ಸಿಎಂಗೆ ತಿರುಗೇಟು ಕೊಟ್ಟರು.

ದಯವಿಟ್ಟು ಯುವಕರು ಕುಮಾರಣ್ಣ ಬಂದಾಗ ಪಟಾಕಿ ಹೊಡೆಯಬೇಡಿ. ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಕಾರ್ಯಕರ್ತರಲ್ಲಿ ದೇವೇಗೌಡರು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *