ಸಿದ್ದು ಸಿಎಂ ಕೂಗು ಬೆನ್ನಲ್ಲೇ ಅಖಾಡಕ್ಕಿಳಿದ ರಾಜಕೀಯ ಗುರು

ಬೆಂಗಳೂರು: ದೋಸ್ತಿ ಕಾಂಗ್ರೆಸ್‍ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಕೂಗು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಸಹ ಯಾವುದೇ ಪ್ರತಿಕ್ರಿಯೆ ನೀಡದೇ ತೆರೆಮರೆಯಲ್ಲಿ ಸಿಎಂ ಕುರ್ಚಿಯತ್ತ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಶಿಷ್ಯ ಸಿದ್ದರಾಮಯ್ಯರ ಏಟಿಗೆ ತಿರುಗೇಟು ನೀಡಲು ಸ್ವತಃ ಗುರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಅಖಾಡಕ್ಕೆ ಇಳಿದಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದೊಡ್ಡ ರಾಜಕೀಯ ಆಟವನ್ನು ದೇವೇಗೌಡರು ಸಿದ್ಧತೆ ನಡೆಸಿಕೊಂಡಿದ್ದಾರೆ. 2004ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರುದ್ಧ ಕಾಂಗ್ರೆಸ್ ರಚಿಸಿದ್ದ ತಂತ್ರವನ್ನೇ ದೇವೇಗೌಡರು ಪ್ರಯೋಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ತಂತ್ರವನ್ನೇ ಪ್ರಯೋಗಿಸಿ ಶಿಷ್ಯ ಸಿದ್ದರಾಮಯ್ಯರಿಗೆ ಶಾಕ್ ನೀಡಲು ದೊಡ್ಡಗೌಡರು ಪ್ಲಾನ್ ಮಾಡಿ, ಮೈತ್ರಿ ಸರ್ಕಾರ ಉಳಿಸಲು ರಣವ್ಯೂಹ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಪ್ಲಾನ್?
2004ರಲ್ಲಿ ಎಸ್.ಎಂ.ಕೃಷ್ಣ ಸೋತಾಗ ಅಂದು ಅವರನ್ನು ಕಾಂಗ್ರೆಸ್ ರಾಜ್ಯಪಾಲರನ್ನಾಗಿ ಮಾಡಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೇವೇಗೌಡರು ನಾಂದಿ ಹಾಡಿದ್ದರು. ಈಗ ಇದೇ ಅಸ್ತ್ರವನ್ನು ಪ್ರಯೋಗಿಸಿ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೇಳುವ ಸಾಧ್ಯತೆಯಿದೆ. ಲೋಕ ಫಲಿತಾಂಶದಲ್ಲಿ ಮೋದಿ ವಿರುದ್ಧ ಜನಾದೇಶ ಬಂದು ಎನ್‍ಡಿಎಗೆ ಹಿನ್ನಡೆಯಾದರೆ ಆಗ ಗೌಡರ ತಮ್ಮ ದಾಳವನ್ನು ಉರುಳಿಸಲು ಆರಂಭಿಸಲಿದ್ದಾರೆ ಎನ್ನಲಾಗಿದೆ.

ಚಂದ್ರಬಾಬು ನಾಯ್ಡು, ಶರದ್ ಪವಾರ್ ಮುಂದಿಟ್ಟುಕೊಂಡು ದೇವೇಗೌಡರ ಚದುರಂಗದಾಟ ಆಡಲು ಮುಂದಾಗಿದ್ದು, ಸಿದ್ದರಾಮಯ್ಯರನ್ನು ದೆಹಲಿ ರಾಜಕೀಯಕ್ಕೆ ಕರೆಸಿಕೊಳ್ಳಿ ಅಂತಾ ಕೈ ನಾಯಕರ ಮೇಲೆ ಒತ್ತಡ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಮೋದಿ ಮತ್ತೆ ಪಿಎಂ ಆದ್ರೂ ಕರ್ನಾಟಕ ಕಾಂಗ್ರೆಸ್‍ಗೆ ದೋಸ್ತಿ ಅನಿವಾರ್ಯ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸೇಫ್ ಆಗಿರಬೇಕಾದ್ರೆ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವುದು ಉತ್ತಮ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಮನದಟ್ಟು ಮಾಡಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *