ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

ಹಾವೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಅಪಘಾತವಾಗಿದ್ದು, ಸಚಿವರು ಕೊಲೆ ಯತ್ನ ಅಂತ ಆರೋಪಿಸಿದ್ದರು. ಈ ಬೆನ್ನಲ್ಲೇ ಹಾವೇರಿ ಎಸ್ ಪಿ ಕೆ. ಪರಶುರಾಮ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅನಂತಕುಮಾರ್ ಹೆಗ್ಡೆ ಅವರು ಶಿರಸಿಯಿಂದ ಬೆಂಗಳೂರಿಗೆ ಹೋಗುವಾಗ ರಾತ್ರಿ 10 ಗಂಟೆ ಸಮಯದಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಸಚಿವರ ಬೆಂಗಾವಲು ಪೊಲೀಸ್ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಬೆಂಗಾವಲು ವಾಹನದಲ್ಲಿದ್ದ ಎಎಸ್‍ಐ ಪ್ರಭು ತಳವಾರ ಮತ್ತು ಚಾಲಕರು ಗಾಯಗೊಂಡಿದ್ದಾರೆ.

ಎಸ್‍ಪಿ ಸ್ಪಷ್ಟನೆ:
ಲಾರಿ ಚಾಲಕ ನಾಸೀರ ಅಹ್ಮದ್ ಮಾಫೀಜ್ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿ. ಭಾನುವಾರ ರಾತ್ರಿ ಎನ್ ಆರ್ ಪುರದಿಂದ ರಬ್ಬರ್ ವುಡ್ ಲೋಡ್ ಮಾಡಿಕೊಂಡು ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಗೆ ಅನ್‍ಲೋಡ್ ಮಾಡಿದ್ದಾರೆ. ಸೋಮವಾರ ಹುಬ್ಬಳಿಯಲ್ಲಿ ಉಳಿದುಕೊಂಡು ಮಂಗಳವಾರ ಅದೇ ಲಾರಿಯಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆದ್ರೆ ಮಾರ್ಗ ಮಧ್ಯದಲ್ಲಿ ಸಂಬಂಧಿಕರ ಫೋನ್ ಬಂದಿದೆ. ಹಾಗೇ ಮಾತನಾಡುತ್ತಾ ಹಲಗೇರಿ ಬೈಪಾಸ್ ಗೆ ಹೋಗದೇ ಓವರ್ ಬ್ರಿಡ್ಜ್ ಗೆ ಬಂದಿದ್ದಾರೆ. 100 ಮೀಟರ್ ನಷ್ಟು ಬಂದಾಗ ದಾರಿ ತಪ್ಪಿದೆ ಅಂತಾ ತಿಳಿದ ಕೂಡಲೇ ಅಲ್ಲೆ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಸಚಿವರ ಬೆಂಗಾಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಲಾರಿ ಮತ್ತು ಚಾಲಕನನ್ನು ವಶಪಡಿಸಿಕೊಂಡಿದ್ದು, ವಿಚಾರಣೆಯನ್ನು ನಡೆಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ.

ಈಗಾಗಲೇ ಮುತ್ತಿನಕಟ್ಟೆ ಗ್ರಾಮಕ್ಕೆ ನಮ್ಮ ಪೊಲೀಸರು ತಂಡ ಕಳುಹಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನಾಸೀರ್ ಮೊಬೈಲ್ ವಶಕ್ಕೆ ಪಡೆದಿದ್ದು, ಕಾಲ್ ಡಿಟೇಲ್ಸ್ ಚೆಕ್ ಮಾಡಲಾಗ್ತಿದೆ. ಮೇಲ್ನೊಟಕ್ಕೆ  ಸಚಿವರ ಹತ್ಯೆಗೆ ಯತ್ನ ನಡೆದಿದೆ ಅನ್ನೋದು ಕಂಡು ಬಂದಿಲ್ಲ. ಸಂಬಂಧ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ರಾಣೇಬೆನ್ನೂರು ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಿಂದ ಬೆಂಗಾವಲು ವಾಹನದಲ್ಲಿದ್ದ ಎಎಸ್‍ಐ ಪ್ರಭು ತಳವಾರ ಎಂಬವರ ಕಾಲಿಗೆ ಗಾಯವಾಗಿತ್ತು. ಆದ್ರೆ ಘಟನೆ ನಡೆದ ಕೆಲವೇ ಕೆಲವು ನಿಮಿಷಗಳಲ್ಲಿ ಸಚಿವ ಹೆಗ್ಡೆ ಉದ್ದೇಶಪೂರ್ವಕವಾಗಿ ನನ್ನ ಹತ್ಯೆಗೆ ಪ್ರಯತ್ನ ನಡೆದಿದೆ. ನನ್ನ ವಾಹನ ಸ್ಪೀಡ್ ಇದ್ದಿದ್ದರಿಂದ ನಾನು ಪಾರಾದೆ ಅಂತಾ ಟ್ವೀಟ್ ಮಾಡಿದ್ದರು.

https://youtu.be/cwbDP5ViV3U

Comments

Leave a Reply

Your email address will not be published. Required fields are marked *