ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ!

ಹಾವೇರಿ: ಆಸ್ತಿ ವಿಚಾರಕ್ಕಾಗಿ ತಮ್ಮ ಸಮುದಾಯದ ಜನರೇ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾನಗಲ್ ತಾಲೂಕಿನ ಹಿರೂರು ಗ್ರಾಮ ಸಮೀಪ ಗೊಲ್ಲರ ಬಿಡಾರ ನಿವಾಸಿ ಆಶಾ ಗೊಲ್ಲರ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಶುಕ್ರವಾರ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಆಶಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಗಿದ್ದೇನು?:
ಆಶಾ ತಂದೆ ಪುಟ್ಟಪ್ಪ ಗೊಲ್ಲರ ಮನೆಯ ಪಕ್ಕದಲ್ಲಿ ದೇವಸ್ಥಾನವಿದೆ. ಹೀಗಾಗಿ ಮನೆಯ ಪಕ್ಕದ ಖಾಲಿ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವಂತೆ ಸಮುದಾಯದ ಕೆಲ ಮುಖಂಡರು ಪುಟ್ಟಪ್ಪನಿಗೆ ಕೇಳಿದ್ದಾರೆ. ಆದರೆ ಪುಟ್ಟಪ್ಪ ಜಾಗವನ್ನು ನೀಡಲು ನಿರಾಕರಿಸಿದ್ದಾರೆ.

ದೇವಸ್ಥಾನಕ್ಕೆ ಜಾಗ ಕೊಡಲು ಹಿಂದೇಟು ಹಾಕಿದ್ದರಿಂದ ನಮ್ಮನ್ನು ಸೇರಿದಂತೆ ಸಂಬಂಧಿಕರ ನಾಲ್ಕು ಕುಟುಂಬಗಳಿಗೆ ಸಮುದಾಯದ ಜನರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದಾಗಿ ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಆಶಾ ಪೋಷಕರು ದೂರಿದ್ದಾರೆ.

ಆಶಾ ಕಾಲೇಜಿಗೆ ಹೋಗುತ್ತಿದ್ದಾಗ ನಾನು ಹತ್ತುವ ಬಸ್‍ನಲ್ಲಿ ನೀನು ಹತ್ತಬೇಡ. ನೀನು ಮಾತನಾಡಿಸಿದರೆ ನಾವು 5 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ. ನಮ್ಮಿಂದ ದೂರವಿರು ಎಂದು ಬಿಡಾರದ ಜನರು ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಆಶಾ ತನ್ನ ಸ್ನೇಹಿತೆಯ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಳು. ಆಗ ಕೆಲವರು ಆಕೆಯನ್ನು ಮನೆಯಿಂದ ಹೊರ ದೂಡಿದ್ದರು. ಈ ಘಟನೆಯಿಂದಾಗಿ ಆಶಾ ಮುಜುಗುರಕ್ಕೆ ಒಳಗಾಗಿ, ಮನನೊಂದಿದ್ದಳು. ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಆಶಾ ತಾಯಿ ಆರೋಪಿಸಿದ್ದಾರೆ.

ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಗೆ ಮೃತ ಆಶಾ ಪೋಷಕರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆಶಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾನಗಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *