ಮನೆಯಿಂದ ಹೊರ ಬಂದವ್ರಿಗೆ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ ಪಿಎಸ್‍ಐ

ಹಾವೇರಿ: ಭಾರತ ಲಾಕ್‍ಡೌನ್ ಇದ್ದರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡುತ್ತಿದ್ದವರನ್ನು ತಡೆದು ಪಿಎಸ್‍ಐ ಒಬ್ಬರು ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ರಾಣೆಬೆನ್ನೂರು ನಗರ ಠಾಣೆ ಪಿಎಸ್‍ಐ ಪ್ರಭು ಕೆಳಗನಿಮನಿ ಅನಗತ್ಯವಾಗಿ ಹೊರಗೆ ಓಡಾಡೋರಿಗೆ ಈ ರೀತಿಯಾಗಿ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಯಾರೂ ಮನೆ ಬಿಟ್ಟು ಹೊರಗೆ ಓಡಾಡಬೇಡಿ ಎಂದು ಪಿಎಸ್‍ಐ ನಗರದಲ್ಲಿ ಸಾಕಷ್ಟು ಬಾರಿ ತಿಳಿ ಹೇಳಿದ್ದರು. ಆದರೂ ಕೆಲವರು ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದರು.

ಇದರಿಂದ ಬೇಸರಗೊಂಡ ಪಿಎಸ್‍ಐ ಪ್ರಭು, ಯಾರಿಗೂ ಹೊಡೆಯದೆ, ಬಡಿಯದೆ ಎಲ್ಲರನ್ನೂ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಿಸಿ. ಕೈ ಮುಂದೆ ಮಾಡಿಸಿ ದೇವರ ಹೆಸರಿನಲ್ಲಿ ಮನೆಯಿಂದ ಹೊರಗೆ ಓಡಾಡೋದಿಲ್ಲ ಎಂದು ಪ್ರಮಾಣ ಮಾಡಿಸಿದ್ದಾರೆ. ಪಿಎಸ್‍ಐ ಸ್ವತಃ ತಾವೇ ಹೊರಗೆ ಓಡಾಡುತ್ತಿದ್ದವರನ್ನು ನಿಲ್ಲಿಸಿ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿ, ಬುದ್ಧಿ ಮಾತು ಹೇಳಿ ಕಳಿಸಿದ್ದಾರೆ.

Comments

Leave a Reply

Your email address will not be published. Required fields are marked *