ವಾಟ್ಸಪ್ ಸ್ಟೇಟಸ್‍ಗೆ ಗೆಳತಿ ಕಮೆಂಟ್ ಮಾಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಹಾವೇರಿ: ಪ್ರೇಮ ವೈಫಲ್ಯದಿಂದ ವಿದ್ಯಾರ್ಥಿಯೊಬ್ಬ ಕಾಲೇಜು ಮೈದಾನದಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಜಿ.ಎಚ್.ಕಾಲೇಜಿನಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿ ಜಗದೀಶ್ ಯಲ್ಲಾಪುರ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜಗದೀಶ್ ಜಿ.ಎಚ್.ಕಾಲೇಜು ವಿದ್ಯಾರ್ಥಿಯಾಗಿದ್ದು, ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಆದರೆ ಬುಧವಾರ ಸಂಜೆ ವಿಷ ಸೇವಿಸಿ, ಸಾವನ್ನಪ್ಪಿದ್ದಾನೆ.

ಜಗದೀಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಈ ವಿಚಾರವನ್ನು ಆಕೆಗೆ ನೇರವಾಗಿ ಹೇಳಿರಲಿಲ್ಲ. ಯುವತಿಯ ಮೊಬೈಲ್ ನಂಬರ್ ಪಡೆದಿದ್ದ ಜಗದೀಶ್ ಆಗಾಗ ವಾಟ್ಸಪ್‍ನಲ್ಲಿ ಚಾಟ್ ಮಾಡುತ್ತಿದ್ದ. ಈ ಮಧ್ಯೆ ಜಗದೀಶ್ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ಅರಿತ ಯುವತಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಜಗದೀಶ್ ಪ್ರೀತಿಯ ಸಂದೇಶ ತಿಳಿಸುವ ಹಾಡು, ಬರಹಗಳನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕುತ್ತಿದ್ದ. ಇದ್ಯಾವುದಕ್ಕೂ ಯುವತಿ ಕಮೆಂಟ್ ಮಾಡುತ್ತಿರಲಿಲ್ಲ.

ಗೆಳತಿ ನನ್ನ ವಾಟ್ಸಪ್ ಸ್ಟೇಟಸ್‍ಗಳಿಗೆ ಕಮೆಂಟ್ ಮಾಡುತ್ತಿಲ್ಲ. ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲವೆಂದು ಜಗದೀಶ್ ಗೆಳೆಯ ಮುಂದೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ ಕಾಲೇಜಿನಲ್ಲಿ ಒಬ್ಬನೆ ಕುಳಿತು ಏನನ್ನೋ ಯೋಚನೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಬುಧವಾರ ಸಂಜೆ ಕಾಲೇಜು ಮುಗಿದ ಬಳಿಕ ಮೈದಾನದಲ್ಲಿಯೇ ಕುಳಿತಿದ್ದ. ಕತ್ತಲಾದ ಬಳಿಕ ಅಲ್ಲಿಂದ ಸ್ವಲ್ಪ ದೂರ ಬಂದು ನಿರ್ಜನ ಪ್ರದೇಶದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾಲೇಜಿನಿಂದ ಹಾಸ್ಟೇಲ್‍ಗೆ ಹೋಗುತ್ತಿದ್ದ ಕೆಲ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಜಗದೀಶ್ ಮೃತದೇಹವನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹಾವೇರಿ ನಗರ ಠಾಣೆ ಸಿಪಿಐ ಎಂ.ಐ.ಗೌಡಪ್ಪಗೌಡರ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಗದೀಶ್ ಮೃತದೇಹವನ್ನು ಜಿಲ್ಲಾಸ್ಪತ್ರೆ ಸಾಗಿಸಲಾಗಿದೆ.

ಜಗದೀಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಗದೀಶ್ ಸಾವಿಗೆ ಸಹಪಾಠಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *