ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ

ಹಾಸನ: ಅರಸೀಕೆರೆ ವಿಧಾನ ಕ್ಷೇತ್ರದ ಬಿಜೆಪಿ (BJP) ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರ ರಾಜಕೀಯ ಮಾಜಿ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಬೆಳಗುಂಬ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಗೊಲ್ಲರಹಟ್ಟಿಗೆ ಎನ್.ಆರ್ ಸಂತೋಷ್ ತಮ್ಮ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಬಂದಿದ್ದ ವೇಳೆ ಸೊಸೈಟಿ ವಿಚಾರವಾಗಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಎನ್.ಆರ್ ಸಂತೋಷ್‍ರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಇದನ್ನೂ ಓದಿ: ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ

ನಮ್ಮೂರ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು, ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ ಒಂದು ಕೋಟಿ ದುಡ್ಡು ಹಾಕಿಸಿದ್ದೀವಿ. ಗ್ರಾಮಕ್ಕೆ ಬಂದಿದ್ದೀಯಾ ವೋಟು ಕೇಳಿಕೊಂಡು ಹೋಗು. ನೀನು ಬಂದು ಊರಿಗೆ ಊರನ್ನೇ ಹೊಡೆದಾಡುಸುತ್ತಿದ್ದೀಯಾ ಎಂದು ಹರಿಹಾಯ್ದರು. ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ?, ನಿನಗೆ ನಮ್ಮ ಸೊಸೈಟಿ ಬಗ್ಗೆ ಆಸಕ್ತಿ ಇದ್ದರೆ ನಿನ್ನ ಸ್ವಂತ ಜಾಗ ಕೊಡು. ನಾವ್ಯಾಕೆ ನಿನ್ನ ಜೊತೆ ಬರಬೇಕು, ನಿನ್ನಂತಹವರನ್ನು ಬಹಳ ಜನ ನೋಡಿದ್ದೀವಿ. ಎಲ್ಲಿಂದಲೂ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಎನ್.ಆರ್ ಸಂತೋಷ್ ಮೇಲೆ ಹಲ್ಲೆ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿದ ಎನ್.ಆರ್.ಸಂತೋಷ್ ಸ್ಥಳದಿಂದ ಕಾಲ್ಕಿತ್ತರು.

Comments

Leave a Reply

Your email address will not be published. Required fields are marked *