ತಿಥಿ ನಡೆದು ಎರಡು ದಿನದ ನಂತ್ರ ಮನೆಗೆ ಬಂದ ವ್ಯಕ್ತಿ

ಹಾಸನ: ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲ್ಲೂಕು ಶಂಖ ಗ್ರಾಮದಲ್ಲಿ ನಡೆದಿದೆ.

ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು 15 ದಿನಗಳ ಹಿಂದೆ ನಾಪತ್ತೆಯಾಗಿದ್ದರು. 15 ದಿನಗಳು ಕಳೆದರೂ ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು.

ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿದ್ದರು.

ಕುಟುಂಬದ ಸದಸ್ಯರು ಶಿವಣ್ಣನ ಮೃತದೇಹ ಎಂದು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂತಿರುಗಿದ್ದಾರೆ.

ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿದೆ. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈಗ ಅಂತ್ಯಸಂಸ್ಕಾರ ನಡೆಸಿದ ದೇಹ ಯಾರದ್ದು ಎನ್ನುವ ಪ್ರಶ್ನೆ ಎದ್ದಿದೆ.

Comments

Leave a Reply

Your email address will not be published. Required fields are marked *