ಅಮೂಲ್ಯ ಮಾತು ಸರಿಯಾದುದಲ್ಲ – ಹೆಚ್‍ಡಿಡಿ

ಹಾಸನ: ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ವಿಚಾರದ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ, ಆಕೆ ಮಾತು ಸರಿಯಾದುದಲ್ಲ ಅಂತ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಶಿವರಾತ್ರಿಯ ಜಾಗರಣೆಯ ಸಲುವಾಗಿ ಬೆಂಗಳೂರಿನಿಂದ ಹುಟ್ಟೂರು ಹರದನಹಳ್ಳಿಗೆ ತೆರಳುವ ಸಂದರ್ಭದಲ್ಲಿ ವಿಶ್ರಾಂತಿಗೆಂದು ಹಾಸನದ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಪಾಕಿಸ್ತಾನದ ಹೆಸರಲ್ಲಿ ಜಿಂದಾಬಾದ್ ಅನ್ನೋದು ಸರಿಯಾದ ತೀರ್ಮಾನ ಅಲ್ಲ. ಪೊಲೀಸರು ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದಾರೆ ಯಾವ ಕಾರಣದಿಂದ ಆ ಹೆಣ್ಣು ಮಗು ಈ ರೀತಿ ಹೇಳಿತು ಅನ್ನೋದು ಗೊತ್ತಿಲ್ಲ ಈಗಾಗಲೇ ವಿಚಾರಣೆ ನಡೆಯುತ್ತಿದೆ ಎಂದರು.

ಇದರ ಜೊತೆಗೆ ಕಾಶ್ಮೀರಿ ಫಲಕ ಹಿಡಿದಿರುವ ಬಗ್ಗೆ ಕೂಡ ಗಮನಿಸಿದ್ದೇನೆ. ಇದರ ಹಿನ್ನೆಲೆ ಕೂಡ ಏನ್ ಇರುತ್ತೋ ಗೊತ್ತಿಲ್ಲ ಎಂದು ಬೇಸರದಿಂದಲೇ ಮಾತು ಮುಂದುವರಿಸಿದರು. ಇಂತಹ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ಅವರ ಕರ್ತವ್ಯ ಎಂದು ತಿಳಿಸಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಗುಜರಾತ್ ಭೇಟಿ ವಿಚಾರದ ಬಗ್ಗೆ ಕೇಳಿದಾಗ, ಅವರ ಬಗ್ಗೆ ನಾನು ಈಗ ಪ್ರತಿಕ್ರಿಯಿಸಲ್ಲ ಎಂದು ತಮ್ಮ ಮಾತನ್ನು ಮೊಟಕುಗೊಳಿಸಿದರು.

Comments

Leave a Reply

Your email address will not be published. Required fields are marked *