ಮಾಜಿ ಸಚಿವರ ಪರ ಪ್ರಚಾರಕ್ಕೆ ಇಳಿದಿದ್ದ ಶಿಕ್ಷಕ ಅಮಾನತು..!

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಶಿಕ್ಷಕನನ್ನು ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬಿದರೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕೆ.ಟಿ.ಮೋಹನ್ ಕುಮಾರ್ ಅಮಾನತಾಗಿರುವ ಶಿಕ್ಷಕ. ಮೋಹನ್ ಚುನಾವಣೆ ಪ್ರಚಾರ ಮಾಡಿರುವ ಕುರಿತು ಬಿಇಒ ಕೆ.ಎನ್.ಶಿವನಂಜೇಗೌಡ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಶಿಕ್ಷಕನನ್ನು ಪ್ರಾಥಮಿಕ ತನಿಖೆ ನಡೆಸಿ ಅಮಾನತು ಮಾಡಿದ್ದಾರೆ.

ಏನಿದು ಪ್ರಕರಣ?:
ಶಿಕ್ಷಕ ಮೋಹನ್ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ಪರ ಪ್ರಚಾರ ಮಾಡಿದ್ದರು. ವಾಟ್ಸಾಪ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎ.ಮಂಜು ಪರ ಮತಯಾಚನೆ ಮಾಡುತ್ತಿದ್ದ ವಿಡಿಯೋವನ್ನು ಕಳುಹಿಸಿದ್ದರು. ಅಷ್ಟೇ ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಮೋಹನ್ ಕಾಂಗ್ರೆಸ್‍ಗೆ ಮತ ಹಾಕುವಂತೆ ಶಿಕ್ಷಕರಿಗೆ ಒತ್ತಾಯ ಹೇರಿದ್ದರು ಎನ್ನಲಾಗಿತ್ತು.

ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮೋಹನ್ ವಿರುದ್ಧ ಬಿಇಒ ಕೆ.ಎನ್.ಶಿವನಂಜೇಗೌಡ ಅವರು ತನಿಖೆ ಆರಂಭಿಸಿದ್ದರು. ಈ ವೇಳೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಮೋಹನ್ ಪ್ರಚಾರದಲ್ಲಿ ತೊಡಗಿದ್ದು ತಿಳಿದು ಬಂದಿತ್ತು. ಹೀಗಾಗಿ ಸದ್ಯ ಮೋಹನ್ ಗೆ ಅಮಾನತು ಆದೇಶ ಪತ್ರ ಹೊರಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *