ಮನೆಗೆ ಕರೆಸಿಕೊಂಡು ಮಹಿಳೆಗೆ ಲೈಂಗಿಕ ದೌರ್ಜನ್ಯ – ವಿಡಿಯೋ ತೋರಿಸಿ ಕನ್ನಡ ಸಿರಿ ಸಂಘಟನೆಯ ಅಧ್ಯಕ್ಷ ಬೆದರಿಕೆ

ಬೆಂಗಳೂರು: ಕನ್ನಡ ಸಂಘಟನೆಯ ಅಧ್ಯಕ್ಷನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದೀಗ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

ಆನಂದ್ ಬಂಧಿತ ಕನ್ನಡ ಸಿರಿ ಸಂಘಟನೆ ಅಧ್ಯಕ್ಷ. ಆರ್‌ಟಿಐ ಅಡಿಯಲ್ಲಿ ಮಗುವಿಗೆ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರಿಂದ ಆರೋಪಿ ಆನಂದ್‍ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಆನಂದ್ ಮಹಿಳೆಗೆ ತನ್ನ ಮಗುವಿಗೆ ಆರ್‌ಟಿಐ ಅಡಿಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿದ್ದಾನೆ. ಈ ಬಗ್ಗೆ ಮಾತನಾಡಲು ಮಹಿಳೆಯನ್ನು ಹಾರೋಹಳ್ಳಿಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಅಷ್ಟೇ ಅಲ್ಲದೇ ಸಂತ್ರಸ್ತೆ ಜೊತೆಗಿನ ಖಾಸಗಿ ವಿಡಿಯೋವನ್ನ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಬೆದರಿಕೆವೊಡ್ಡಿದ್ದಾನೆ. ಒಂದು ವೇಳೆ ನನ್ನ ಜೊತೆ ಸಹಕರಿಸದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡುವುದಾಗಿ ಆರೋಪಿ ಆನಂದ್ ಬೆದರಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.

ನೊಂದ ಮಹಿಳೆ ಇದೀಗ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಆನಂದ್‍ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *