ಒಂದೇ ಕಣ್ಬಿಟ್ಟ ಆಂಜನೇಯ ಮೂರ್ತಿ- ಭಜರಂಗಿಯನ್ನು ನೋಡಲು ಮುಗಿಬಿದ್ದ ಭಕ್ತರು

ಬೆಳಗಾವಿ: ಆಂಜನೇಯ ಮೂರ್ತಿ ಒಂದೇ ಕಣ್ಣನ್ನು ತೆರೆದ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ನಂದಗಡ ಗ್ರಾಮ ಈ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಒಂದೇ ಕಣ್ಣು ಬಿಟ್ಟ ಹನುಮನ ದರ್ಶನ ಪಡೆಯಲು ಭಕ್ತರು ಕಾತುರದಿಂದ ಮುಗಿಬಿದ್ದು ಸ್ಥಳಕ್ಕೆ ಬರುತ್ತಿದ್ದು, ಒಂದು ಕಣ್ಣನ್ನು ಬಿಟ್ಟಿರುವ ವಾಯುಪುತ್ರನ ಮೂರ್ತಿ ಕಂಡು ಅಚ್ಚರಿಪಟ್ಟಿದ್ದಾರೆ. ಆಂಜನೇಯ ಮೂರ್ತಿ ಒಂದೇ ಕಣ್ಣು ಬಿಟ್ಟಿರುವುದು ಶುಭ ಶಕುನವೋ? ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆಮಾಡಿದೆ.

ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹವಿದ್ದು, ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆಯ ಜನರು ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಭಕ್ತರು ಬರುತ್ತಾರೆ. ಹನುಮನ ದರ್ಶನ ಪಡೆದು ಪುನಿತರಾಗುತ್ತಾರೆ. ಈ ಹಿಂದೆ ಇದೇ ಆಂಜನೇಯನ ವಿಗ್ರಹ ಎರಡು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿತ್ತು ಎಂದು ಕೆಲ ಸ್ಥಳೀಯರು ತಿಳಿಸಿದ್ದಾರೆ.

ಅದೇನೆ ಇರಲಿ, ಆಂಜನೇಯನ ಕಲ್ಲಿನ ವಿಗ್ರಹ ಕಣ್ಣು ಬಿಟ್ಟಿರುವುದು ಅಚ್ಚರಿಯ ವಿಷಯವಾಗಿದ್ದು, ಭಕ್ತರು ಆತಂಕದಲ್ಲಿದ್ದರೂ ಕೂಡ ಆನಂಜನೇಯನ ಮಹಿಮೆ ಕಂಡು ಇದೆಂಥ ವಿಸ್ಮಯ ಎಂದು ಚರ್ಚಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *