ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ

ಬೆಂಗಳೂರು: ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಟೀಕೆ ಮಾಡಿದ್ದ ಹಂಸಲೇಖ ಬಸವನಗುಡಿ ಠಾಣೆಗೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ.

2 ಬಾರಿ ನೋಟಿಸ್ ಕೊಟ್ಟಿದ್ರೂ ಹಂಸಲೇಖ ಪೊಲೀಸ್ ಠಾಣೆಗೆ ಹಾಜರಾಗಿರಲಿಲ್ಲ. ಇಂದು ತಮ್ಮ ವಕೀಲ ದ್ವಾರಕನಾಥ್‍ರೊಂದಿಗೆ ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾದರು ಈ ವೇಳೆ, 30ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರೋ ಹಂಸಲೇಖ, ನನ್ನ ಮಾತುಗಳು ಇಷ್ಟೊಂದು ಸ್ವರೂಪ ಪಡೆದುಕೊಳ್ಳುತ್ತೆ ಅಂತಾ ಗೊತ್ತಿರಲಿಲ್ಲ. ಯಾಕೆ ಹಾಗೆ ಹೇಳಿದೆನೋ ಗೊತ್ತೇ ಆಗ್ಲಿಲ್ಲ. ಯಾವ ಉದ್ದೇಶವು ನನ್ನಲ್ಲಿ ಇರಲಿಲ್ಲ. ಮಾತನಾಡುವ ಬರದಲ್ಲಿ ಹಾಗೆ ಹೇಳಿದ್ದೇನೆ. ನನ್ನ ಹೆಂಡತಿಯೇ ಬೇಸರ ವ್ಯಕ್ತಿ ಪಡಿಸಿದ್ದಾರೆ. ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನ ನಿಂದಿಸೋ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ ಅಂತ ತನಿಖಾ ಅಧಿಕಾರಿ ಮುಂದೆ ಗದ್ಗದಿತರಾದರು. ಇದನ್ನೂ ಓದಿ: ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ಹೇಳಿ ಕಳಿಸಿದ್ದಾರೆ. ಹಂಸಲೇಖ ಠಾಣೆಗೆ ಹಾಜರಾಗುತ್ತಿದ್ದಂತೆ ಸ್ಥಳದಲ್ಲಿ ಭಾರಿ ಹೈಡ್ರಾಮವೇ ನಡೀತು. ಹಂಸಲೇಖ ಪರ-ವಿರುದ್ಧ ಪ್ರತಿಭಟನೆ ನಡೆಯಿತು. ಹಿಂದೂಪರ ಸಂಘಟನೆಗಳು, ಭಜರಂಗದಳ ಕಾರ್ಯಕರ್ತರು ಹಂಸಲೇಖ ಕ್ಷಮೆಗೆ ಪಟ್ಟುಹಿಡಿದರು. ಹಂಸಲೇಖ ಪರ ನಟ ಚೇತನ್, ಬೆಂಬಲಿಗರು ಕೂಡ ಪ್ರತಿ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಚೇತನ್, ಎಲ್ಲರಿಗೂ ಹಕ್ಕಿದೆ. ಹಂಸಲೇಖ ಕ್ಷಮೆ ಕೇಳುವ ಅವಶ್ಯಕತೆ ಇಲ್ಲದಿದ್ದರೂ ಕೇಳಿದ್ದಾರೆ. ಆದರೂ, ಕ್ರಿಮಿನಲ್ ಕೇಸ್ ಹಾಕಿರೋದು ಎಷ್ಟು ಸರಿ ಎಂದು ಕಿಡಿಕಾರಿದರು. ಈ ಮಧ್ಯೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಹಂಸಲೇಖ ಹೇಳಿರುವುದರಲ್ಲಿ ತಪ್ಪೇನಿದೆ?. ಬಿಜೆಪಿಯವರು ದಲಿತರ ಮನೆಗೆ ಹೋದರು ಹೊಟೇಲ್‍ನಿಂದ ಊಟ ತರಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

Comments

Leave a Reply

Your email address will not be published. Required fields are marked *