ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

nonveg

ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಾಂಸ ಮಾರಾಟ ಜೋರಾಗಿದೆ. ಮಾಂಸದ ಮಳಿಗೆಗಳಲ್ಲಿ ಜನರ ದಂಡೇ ನೆರೆದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದದ ಮಧ್ಯೆಯೇ ಈ ಬಾರಿ ಮಾಂಸ ಮಾರಾಟ ಭರ್ಜರಿಯಾಗಿ ಸಾಗಿದೆ.

ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಮಾಂಸ ಮಾರಾಟ ಅಂಗಡಿಗಳಲ್ಲಿ ಸಿದ್ಧತೆ ನಡೆದಿತ್ತು. ಬೆಳಗ್ಗೆ ಮಾಂಸದಂಗಡಿಗಳತ್ತ ಜನರ ದಂಡು ಬರಲಾರಂಭಿಸಿತು. ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ 

NONVEG

ಬೆಂಗಳೂರಿನ ಯಶವಂತ ಮಾರುಕಟ್ಟೆ, ಮೈಸೂರಿನ ಪಾಪಣ್ಣ ಮಟನ್ ಸ್ಟಾಲ್, ಕೆ.ಜಿ.ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಖರೀದಿ, ತುಮಕೂರಿನ ಹಿಂದೂ ಮೀಟ್ ಮಾರ್ಟ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಮಳಿಗೆಗಳಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಎಂಬ ಬೋರ್ಡ್‍ಗಳನ್ನೂ ಹಾಕಿದ್ದು, ಜಟ್ಕಾಕಟ್‍ಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಾಶೆಗೊಂಡಿದ್ದ ವ್ಯಾಪಾರಿಗಳ ಮೊಗದಲ್ಲೂ ಹರುಷ ತುಂಬಿದೆ. ಬರುವ ಗ್ರಾಹಕರಿಗೆ ಸಂತಸದಿಂದಲೇ ಮಾಂಸ ನೀಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು

NONVEG

ದಾವಣಗೆರೆಯಲ್ಲಿ ವ್ಯಾಪಾರಿಗಳಿಗೆ ನಿರಾಶೆ
ಯುಗಾದಿ ಹಬ್ಬದಂದು ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ದಾವಣೆಗೆರೆ ಜಿಲ್ಲೆಯ ಜನರು ಚಿಕನ್, ಮಟನ್ ಖರೀದಿಗೆ ನಿರುತ್ಸಾಹ ತೋರಿದ್ದಾರೆ. ಪ್ರತಿ ವರ್ಷ ಹೊಸ ತೊಡಕಿನ ಸಂದರ್ಭದಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಆದರೆ, ಇಂದು ಭಾನುವಾರವಾದರೂ ಮಾರುಕಟ್ಟೆ ಖಾಲಿ-ಖಾಲಿ ಹೊಡೆಯುತ್ತಿದೆ. ಇದರಿಂದ ಅಲಾಲ್ ಕಟ್, ಜಟ್ಕಾ ಕಟ್ ವಿವಾದ ಇಲ್ಲದಂತಾಗಿದೆ. ಚಂದ್ರದರ್ಶನವಾಗಿದ್ದರೆ ವ್ಯಾಪಾರ ಜಾತ್ರೆಯಂತಿರುತ್ತಿತ್ತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದಾರೆ. ಮುಂದೆ ಎಲ್ಲರೂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಾವು ವ್ಯಾಪಾರ ಮಾಡುತ್ತೇವೆ. ಎಲ್ಲರೂ ಸಾಮರಸ್ಯದಿಂದ ಹಳೇ ಪದ್ದತಿಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತೇವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.

 

Comments

Leave a Reply

Your email address will not be published. Required fields are marked *