ಬಿಟ್‍ಕಾಯಿನ್ ಹಗರಣಕ್ಕೆ ಸ್ಫೋಟಕ ತಿರುವು – ಪೊಲೀಸ್ ಕಸ್ಟಡಿಯಲ್ಲೇ ಶ್ರೀಕಿಗೆ ಮಾದಕ ದ್ರವ್ಯ!

– ಪೊಲೀಸರ ವಿರುದ್ಧ ಶ್ರೀಕಿ ತಂದೆ ಆರೋಪ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬೆಂಗಳೂರು ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಈ ಸಂಬಂಧ ಹ್ಯಾಕರ್ ಶ್ರೀಕಿ ತಂದೆ ಗೋಪಾಲ್ ರಮೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು. ಹ್ಯಾಕರ್ ಶ್ರೀಕಿಗೆ ಪೊಲೀಸರೇ ಮಾದಕ ದ್ರವ್ಯ ನೀಡಿದ್ದಾರಂತೆ. ಕಸ್ಟಡಿಯಲ್ಲಿದ್ದಾಗಲೇ ಪೊಲೀಸರೇ ಡ್ರಗ್ಸ್ ನೀಡಿದ್ದರು ಎಂದು ನ್ಯಾಯಾಧೀಶರ ಎದುರೇ ಇನ್ಸ್‍ಪೆಕ್ಟರ್ ಚಂದ್ರಾಧರ್ ವಿರುದ್ಧ ಶ್ರೀಕಿ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಶ್ರೀಕಿ ಆರೋಪ ಹಿನ್ನೆಲೆಯಲ್ಲಿ ಮಾದಕದ್ರವ್ಯ ಪರೀಕ್ಷೆಗೆ ಕೋರ್ಟ್ ಆದೇಶ ನೀಡಿದೆ.

ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಕೋರ್ಟ್ ಆದೇಶಿಸಿತ್ತು. ಆದರೆ ವಿಕ್ಟೋರಿಯಾದಲ್ಲಿ ಕೋವಿಡ್ ವಾರ್ಡ್ ಇದ್ದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪರೀಕ್ಷೆಗೆ ಸೂಚಿಸಿತ್ತು. ನಂತರ ಪೊಲೀಸರ ಮನವಿ ಪರಿಗಣಿಸಿ ಬೌರಿಂಗ್ ಆಸ್ಪತ್ರೆಗೆ ಪರೀಕ್ಷೆಗೆ ಆದೇಶ ನೀಡಿದೆ. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

ಇತ್ತ ಪ್ರಕರಣ ಸಂಬಂಧ ಗೋಪಾಲ್ ರಮೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರ ವಿರುದ್ಧ ನನ್ನ ಮಗ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಎಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ರೀಕಿ ತಂದೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

ನನ್ನ ಮಗನಿಂದ ಒತ್ತಾಯಪೂರ್ವಕವಾಗಿ ಬೇರೆ ಕೆಲಸ ಮಾಡಿಸಲು ಯತ್ನ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರ ವಿರುದ್ಧವೇ ಶ್ರೀಕಿ ತಂದೆ ಸ್ಫೋಟಕ ಆರೋಪ ಮಾಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ನನ್ನ ಮಗನಿಗೆ ಮಾದಕ ದ್ರವ್ಯ ನೀಡಿದ್ದಾರೆ. ಆತನಿಂದ ಬೆಂಗಳೂರು ಪೊಲೀಸರು ಬಲವಂತವಾಗಿ ಹೇಳಿಕೆ ಪಡೀತಿದ್ದಾರೆ. ಆತನಿಂದ ಏನೋ ಬೇರೆ ಬೇರೆ ಕೆಲಸ ಮಾಡಿಸಲು ಪೊಲೀಸರು ಯತ್ನಿಸ್ತಿದ್ದಾರೆ. ನನ್ನ ಮಗನೇ ಆರೋಪಿಸಿರುವ ಕಾರಣ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಿ. ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಶ್ರೀಕಿ ತಂದೆ ಗೋಪಾಲ್ ರಮೇಶ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *