ಕೊಲ್ಲೂರಿನಲ್ಲಿ ರೇವಣ್ಣ – ಸತತ ಆರು ದಿನದಿಂದ ಬರಿಗಾಲಲ್ಲಿ ಟೆಂಪಲ್ ರನ್

ಉಡುಪಿ: ಅತೃಪ್ತರ ರಾಜೀನಾಮೆ ಪರ್ವದಿಂದ ಪತನದತ್ತ ಸಾಗುತ್ತಿರುವ ದೋಸ್ತಿ ಸರ್ಕಾರವನ್ನು ಉಳಿಸಲು ರೇವಣ್ಣ ಸತತ ಆರು ದಿನದಿಂದ ಬರಿಗಾಲಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.

ಕೋಮಾದಲ್ಲಿರುವ ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲು ರೇವಣ್ಣ ಟೆಂಪಲ್ ರನ್ ಕೈಗೊಂಡಿದ್ದು, ದೇಗುಲಗಳ ನಗರಿ ಉಡುಪಿಯಲ್ಲಿ ದೇವಾಲಯಗಳ ದರ್ಶನ ಮಾಡಿ ಹೋಗಿದ್ದಾರೆ.

ದೇವೇಗೌಡರ ಕುಟುಂಬ ಕೊಲ್ಲೂರು ಮುಕಾಂಬಿಕೆಯ ಪರಮಭಕ್ತರು. ಅದರಲ್ಲೂ ರೇವಣ್ಣ ಆಗಿದ್ದಾಂಗೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಚಂಡಿಕಾಹೋಮ ನಡೆಸುತ್ತಾರೆ. ಆದರೆ ಈ ಬಾರಿ ಚಂಡಿಕಾಹೋಮ ನಡೆಸಿಲ್ಲ. ಬದಲಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಬಂದು ವಿಶೇಷ ಪೂಜೆ ನಡೆಸಿ ವಾಪಸ್ಸಾಗಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಲು ಬಯಸದ ರೇವಣ್ಣ ವಿಡಿಯೋ ಚಿತ್ರೀಕರಣಕ್ಕೂ ಅವಕಾಶ ಮಾಡಿ ಕೊಟ್ಟಿಲ್ಲ. ಕೊಲ್ಲೂರಿಗೆ ತೆರಳುವ ಮಾರ್ಗದಲ್ಲಿ ಆನೆಗುಡ್ಡೆ ಹಾಗೂ ಹಟ್ಟಿಯಂಗಡಿ ಗಣಪತಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿ ವಿಶ್ವಾಸ ಮತದಲ್ಲಿ  ದೋಸ್ತಿ ಸರ್ಕಾರದ ಗೆಲುವಿಗೆ ಪ್ರಾರ್ಥಿಸಿದ್ದಾರೆ.

ಇಂದು ಭಾನುವಾರ ಉಡುಪಿಯ ಕೊಲ್ಲೂರು ಮುಕಾಂಬಿಕೆಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಶನಿವಾರ ಮೃತ್ಯುಂಜಯ ಹೋಮ ಮಾಡಿಸಿದ್ದರು. ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟೆ ಹೋಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡು ಬಂದಿದ್ದರು. ಗುರುವಾರವೂ ದೇವಸ್ಥಾನಕ್ಕೆ ಹೋಗಿದ್ದು, ಮಂಗಳವಾರ ಬರಿಗಾಲಲ್ಲಿ ಶೃಂಗೇರಿ ದೇವಾಲಯಕ್ಕೆ ಹೋಗಿದ್ದರು. ಹೀಗೇ ರೇವಣ್ಣ ಸತತವಾಗಿ ಬರಿಗಾಲಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.

ರೇವಣ್ಣ ಅವರು ತಮ್ಮ ಇಲಾಖೆ ಅಲ್ಲದೇ ಇತರ ಇಲಾಖೆಯ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮ ರಾಜೀನಾಮೆಗೆ ಇದು ಒಂದು ಕಾರಣ. ರೇವಣ್ಣ ಅವರಿಂದಾಗಿಯೇ ಸರ್ಕಾರ ಈಗ ಬೀಳುವ ಹಂತಕ್ಕೆ ಬಂದಿದೆ ಎಂದು ಅತೃಪ್ತ ಶಾಸಕರು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ರೇವಣ್ಣ ಈಗ ಟೆಂಪಲ್ ರನ್ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *