ದೇಶದ ಚಿತ್ತ ಗುಜರಾತ್, ಹಿಮಾಚಲ ಪ್ರದೇಶದತ್ತ – ಕೆಲವೇ ಗಂಟೆಗಳಲ್ಲಿ ಮಹಾ ಫಲಿತಾಂಶ

ಅಹಮದಾಬಾದ್: ಇಡೀ ದೇಶದ ಚಿತ್ತ ಇಂದು ಗುಜರಾತ್‍ನತ್ತ ನೆಟ್ಟಿದೆ. ಮೋದಿ ಮೋಡಿ ಮಾಡ್ತಾರಾ ಅಥವಾ ರಾಹುಲ್ ಕೈ ಮೇಲಾಗುತ್ತಾ ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೊನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಸತತ ಆರನೇ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, 22 ವರ್ಷಗಳಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಕನಸು ಕಾಣ್ತಿದೆ.

ಇನ್ನು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗುತ್ತೆ. ಇನ್ನೆರೆಡು ವರ್ಷ ದೇಶದಲ್ಲಿ ಸಾಲು ಸಾಲು ಚುನಾವಣೆಗಳಿವೆ. ಕರ್ನಾಟಕ ಸೇರಿ 2018ರಲ್ಲೇ 8 ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್‍ಗಳು ನಡೆಯಲಿವೆ. ಹೀಗಾಗಿ ಈ ಚುನಾವಣೆಗಳಿಗೆ ಗುಜರಾತ್ ಫಲಿತಾಂಶವೇ ದಿಕ್ಸೂಚಿಯಾಗಿದೆ.

ಈಗಾಗಲೇ ಸಮೀಕ್ಷೆಗಳು ಗುಜರಾತ್‍ನಲ್ಲಿ ಕಮಲ ಅರಳಲಿದೆ ಅಂತ ಬಿಜೆಪಿ ಪಾಳಯಕ್ಕೆ ಖುಷಿ ಸುದ್ದಿ ಕೊಟ್ಟಿವೆ. ಈ ಸಮೀಕ್ಷೆಗಳಿಂದ ಬಿಜೆಪಿ ಶಕ್ತಿ ಇನ್ನಷ್ಟು ಜಾಸ್ತಿ ಆಗಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಮುಂದೆ ಚುನಾವಣೆ ಎದುರಿಸಲಿರೋ ಕರ್ನಾಟಕದತ್ತ ಬಿಜೆಪಿ ಗಮನ ಹರಿಸಲು ನಿಚ್ಚಳವಾಗಿದೆ.

ಆದ್ರೆ ಕಾಂಗ್ರೆಸ್ ಮಾತ್ರ ಗುಜರಾತ್‍ನಲ್ಲಿ ಸೋತ್ರು, ಗೆದ್ರು ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನ ರಚಿಸಬೇಕೆಂಬ ಹಠಕ್ಕೆ ಬಿದ್ದಿವೆ. ಇನ್ನು ರಾಜಸ್ತಾನ, ಈಶಾನ್ಯ ರಾಜ್ಯಗಳ ಚುನಾವಣೆ ಮೇಲೂ ಗುಜರಾತ್ ಫಲಿತಾಂಶ ನಿರ್ಣಾಯಕವಾಗಲಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ.

Comments

Leave a Reply

Your email address will not be published. Required fields are marked *