ಗುಜರಾತ್‌ನಲ್ಲಿ ಯುವಕನ ಹತ್ಯೆ – ದೆಹಲಿಯಲ್ಲಿ ಮೌಲ್ವಿ ಅರೆಸ್ಟ್‌

ಅಹಮದಾಬಾದ್: ದಂಧುಕಾದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ದೆಹಲಿಯಲ್ಲಿ ಮೌಲ್ವಿಯನ್ನು ಬಂಧಿಸಿದೆ.

ಮೌಲ್ವಿ ಕಮರ್ಗಾನಿ ಉಸ್ಮಾನಿ ಬಂಧಿತ ಆರೋಪಿ. ಶುಕ್ರವಾರ ಅಹಮದಾಬಾದ್‌ನಲ್ಲಿ ಮೊಹಮ್ಮದ್ ಅಯೂಬ್ ಜವ್ರಾವಾಲಾ ನಂತರ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಎರಡನೇ ಧರ್ಮಗುರು ಉಸ್ಮಾನಿ ಆಗಿದ್ದಾನೆ.

ಉಸ್ಮಾನಿ ಸಂಘಟನೆ ನಡೆಸುತ್ತಿದ್ದು ಹತ್ಯೆಗೈದ ಆರೋಪಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದ. ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ವಿರುದ್ಧ ಪೋಸ್ಟ್‌ ಹಾಕಿದ್ದ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈತ ಪ್ರಚೋದನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಪ್ರಕಟಿಸಿದ್ದಕ್ಕೆ ಜ.25 ರಂದು 30 ವರ್ಷದ ಕಿಶನ್‌ ಬೋಲಿಯಾನನ್ನು ಇಬ್ಬರು ಹತ್ಯೆ ಮಾಡಿದ್ದರು. ಅಹಮದಾಬಾದ್‌ ನಗರದಿಂದ 100 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದ್ದು ಹತ್ಯೆಗೈದವರನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್‌ ಗುರುವಾರ ಬಂದ್‌ಗೆ ಕರೆ ನೀಡಿತ್ತು.

ಕಿಶನ್‌ ಅನ್ಯ ಧರ್ಮಕ್ಕೆ ಸಂಬಂಧಿಸಿದಂತೆ ಜ.6 ರಂದು ಆಕ್ಷೇಪಾರ್ಹ ಪೋಸ್ಟ್‌ ಪ್ರಕಟಿಸಿದ್ದ. ಮಂಗಳವಾರ ಸಂಜೆ 5:30ರ ವೇಳೆಗೆ ಕಿಶನ್‌ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ನಮ್ಮತ್ತ ಗುಂಡು ಹಾರಿಸಿದ್ದರು. ಗುಂಡು ತಗುಲಿದ್ದರಿಂದ ಕಿಶನ್‌ ಮೃತಪಟ್ಟ ಎಂದು ಕಿಶನ್‌ ಸಹೋದರ ಭೌಮಿಕ್‌ ಹೇಳಿದ್ದಾರೆ.  ಇದನ್ನೂ ಓದಿ:  ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

ಭೌಮಿಕ್‌ ನೀಡಿರುವ ದೂರಿನನ್ವಯ ಪೊಲೀಸರು, ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ), 307 (ಕೊಲೆ ಯತ್ನ), 120ಬಿ (ಕ್ರಿಮಿನಲ್‌ ಸಂಚು) ಹಾಗೂ ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೋಸ್ಟ್‌ ವಿವಾದ ಆಗುತ್ತಿದ್ದಂತೆ ಕಿಶನ್‌ ಕ್ಷಮೆ ಯಾಚಿಸಿ ವೀಡಿಯೋ ಬಿಡುಗಡೆ ಮಾಡಿದ್ದ. ಆದರೂ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು ಎಂದು ಭೌಮಿಕ್‌ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *