ಪಂಚೆಯುಟ್ಟ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದ ಸಿಬ್ಬಂದಿಯಿಂದ ಕ್ಷಮೆಯಾಚನೆ

– ಅವಮಾನಿಸಿದ್ದ ಮಾಲ್‌ ಆಡಳಿತ ಮಂಡಳಿಯಿಂದಲೇ ರೈತನಿಗೆ ಸನ್ಮಾನ

ಬೆಂಗಳೂರು: ಪಂಚೆಯುಟ್ಟು ಬಂದಿದ್ದ ರೈತನಿಗೆ (Farmer) ಪ್ರವೇಶ ನಿರಾಕರಿಸಿ ಅವಮಾನಿಸಿದ್ದಕ್ಕೆ ಜಿಟಿ ಮಾಲ್‌ (GT Mall) ಆಡಳಿತ ಮಂಡಳಿ ಕ್ಷಮೆಯಾಚಿಸಿದೆ.

ಘಟನೆ ಕುರಿತು ‘ಪಬ್ಲಿಕ್‌ ಟಿವಿ’ಗೆ ಸ್ಪಷ್ಟನೆ ನೀಡಿದ ಸೆಕ್ಯೂರಿಟಿ ಅರುಣ್‌, ಉದ್ದೇಶಪೂರ್ವಕವಾಗಿ ನಾವು ತಡೆದಿಲ್ಲ. ಮ್ಯಾನೇಜ್‌ಮೆಂಟ್‌ ಅವರಿಂದ ಉತ್ತರ ಬರುವ ತನಕ ಕಾಯಿಸಿದ್ದೆವು ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಬಳಿಕ ಮಾಲ್‌ನಲ್ಲಿ ರೈತನಿಗೆ ಅವಮಾನ – ಪಂಚೆ ಧರಿಸಿದ್ದಕ್ಕೆ ಮಾಲ್‌ ಒಳಗೆ ಬಿಡದ ಸಿಬ್ಬಂದಿ!

ನಿನ್ನೆ ಮಧ್ಯಾಹ್ನವೂ ವ್ಯಕ್ತಿಯೊಬ್ಬರು ಪಂಚೆ ಧರಿಸಿ ಮಾಲ್‌ಗೆ ಬಂದಿದ್ದರು. ಪಂಚೆಯನ್ನು ಮೊಣಕಾಲಿನ ತನಕ ಉಟ್ಕೊಂಡು ನಿಂತಿದ್ರು. ಆಗ ಕೆಳಗಿನ ಫ್ಲೋರ್‌ನಲ್ಲಿ ಬರ್ತ್‌ಡೇ ಪಾರ್ಟಿಯ ಇವೆಂಟ್ ನಡೆಯುತ್ತಿತ್ತು. ಈ ವಿಚಾರವನ್ನು ಮ್ಯಾನೇಜ್‌ಮೆಂಟ್‌ ಗಮನಕ್ಕೆ ತಂದಿದ್ದೆವು ಎಂದಿದ್ದಾರೆ.

ಸಂಜೆ ಮತ್ತೆ ರೈತನೊಬ್ಬ ಪಂಚೆ ಉಟ್ಟುಕೊಂಡು ಬಂದಿದ್ದರು. ಈ ಸಮಯದಲ್ಲಿ ನಾವು ತಡೆದು, ಮ್ಯಾನೇಜ್‌ಮೆಂಟ್‌ ಗಮನಕ್ಕೆ ತಂದಿದ್ದೇವೆ. ಉದ್ದೇಶಪೂರ್ವಕವಾಗಿ ನಾವು ತಡೆದಿಲ್ಲ‌. ಮ್ಯಾನೇಜ್‌ಮೆಂಟ್‌ ಅವರಿಂದ ಉತ್ತರ ಬರುವ ತನಕ ಕಾಯಿಸಿದ್ದೆವು ಅಷ್ಟೆ ಎಂದು ಹೇಳಿದ್ದಾರೆ.

ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದಕ್ಕೆ ಮಾಲ್‌ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಾಲ್‌ ಮುಂದೆ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಸೂದೆಯಲ್ಲಿ ಏನಿದೆ? ಕನ್ನಡಿಗರಿಗೆ ಅರ್ಹತೆ ಹೇಗೆ? ಯಾವ ಹುದ್ದೆಯಲ್ಲಿ ಎಷ್ಟು?

ನಿನ್ನೆ ರೈತ ಫಕೀರಪ್ಪಗೆ ಪ್ರವೇಶ ನಿರಾಕರಿಸಿ ಜಿಟಿ ಮಾಲ್‌ನಲ್ಲಿ ಅವಮಾನಿಸಲಾಗಿತ್ತು. ಇಂದು ಅದೇ ಮಾಲ್‌ ಆಡಳಿತ ಮಂಡಳಿಯ ಉಸ್ತುವಾರಿ ಸುರೇಶ್‌ ಅವರಿಂದ ರೈತ ಫಕೀರಪ್ಪರನ್ನು ಸನ್ಮಾನಿಸಲಾಯಿತು. ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಿದರು.