ನಾಸ್ತಿಕರಾದ್ರೆ ಯಾಕೆ ದೇವಸ್ಥಾನಕ್ಕೆ ಹೋಗ್ತೀರಾ – ಸಿಎಂಗೆ ಜಿಟಿ ದೇವೇಗೌಡ ಖಡಕ್ ಪ್ರಶ್ನೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವಸ್ಥಾನಕ್ಕೆ ಹೋಗಲ್ಲ ಅಂತಾರೆ. ಆದ್ರೆ ಅವರು ಹೋಗದ ದೇವಸ್ಥಾನವಿಲ್ಲ. ಮಾಡಿಸಿದ ಪೂಜೆಯಿಲ್ಲ ಅಂತ ಸ್ಥಳೀಯ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಕಿಡಿಕಾರಿದ್ದಾರೆ.

ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸೇರುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರ ಬಿಟ್ಟು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಬಾರಿ ಚುನಾವಣೆಗೆ ನಿಲ್ಲುತ್ತಾರೆ. ಹೀಗಾಗಿ, ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು.

ಇದೇ ವೇಳೆ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಸಿಎಂ ಸಿದ್ದರಾಮಯ್ಯ ಹೇಳೋದು ಒಂದು ಮಾಡುವುದು ಒಂದು. ದೇವಸ್ಥಾನಕ್ಕೆ ಹೋಗಲ್ಲ ಅಂತಾರೆ. ಆದ್ರೆ ಅವರು ಹೋಗದ ದೇವಸ್ಥಾನವಿಲ್ಲ, ಮಾಡಿಸಿದ ಪೂಜೆಯಿಲ್ಲ ಅಂದ್ರು.

ಸಿದ್ದರಾಮಯ್ಯ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬರೀ ಮೈಯಲ್ಲಿ ಕುಳಿತು ಹೋಮ ಮಾಡಿಸಿದ್ದಾರೆ. ಇಂಥವರು ತಾವು ದೇವರು ನಂಬಲ್ಲ ಅಂತ ಪಾಠ ಮಾಡುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಶಕ್ತಿ ನನಗೆ ಇದೆ. ಕ್ಷೇತ್ರಕ್ಕೆ ಏನೂ ಸಹಾಯ ಮಾಡದ ಸಿದ್ದರಾಮಯ್ಯ ಅವರಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಅವರಿಗೆ ಇಲ್ಲಿ ಸೋಲು ಖಚಿತ ಅಂತ ಹೇಳಿದ್ರು.

Comments

Leave a Reply

Your email address will not be published. Required fields are marked *