73 ಕೋಟಿ ರೂ. ಮೌಲ್ಯದ ನೀರು ಕಳ್ಳತನ

ಮುಂಬೈ: 73 ಕೋಟಿ ರೂ. ಮೌಲ್ಯದ ಅಂತರ್ಜಲ ಕಳ್ಳತನದ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಳ್ಳತನ ಆರೋಪದಡಿಯಲ್ಲಿ ಕಾಲಬಾದೇವಿಯಲ್ಲಿರುವ ಬೋಮಾನಜಿ ಮಾಸ್ಟರ್ ಲೈನ್, ಪಾಂಡ್ಯ ಮೇಂಶನ್ ಮಾಲೀಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ 11 ವರ್ಷಗಳಲ್ಲಿ ಆರೋಪಿ ನೀರು ಸರಬರಾಜು ವ್ಯಕ್ತಿಗಳ ಜೊತೆ ಸೇರಿ 73.19 ಕೋಟಿ ರೂ. ಮೌಲ್ಯದ ನೀರು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆರ್‍ಟಿಐ ಕಾರ್ಯಕರ್ತ ಸುರೇಶ್‍ಕುಮಾರ್ ಎಂಬವರು ಪಾಂಡ್ಯ ಮೇಂಶನ್ ಕಂಪನಿ ವಿರುದ್ಧ ಸಾಕ್ಷಿ ಸಮೇತವಾಗಿ ದೂರು ದಾಖಲಿಸಿದ್ದಾರೆ. ಪಾಂಡ್ಯ ಮೇಂಶನ್ ಕಂಪನಿ ಮಾಲೀಕರಾಗಿರುವ ತ್ರಿಪುರಪ್ರಸಾದ್ ಪಾಂಡ್ಯ ಮತ್ತು ಸಹಭಾಗಿತ್ವದ ಕಂಪನಿಯ ನಿರ್ದೇಶಕರಾದ ಪ್ರಕಾಶ್ ಪಾಂಡ್ಯ ಹಾಗೂ ಮನೋಜ್ ಪಾಂಡ್ಯ ತಮ್ಮ ನಿವೇಶನದಲ್ಲಿ ಅಕ್ರಮವಾಗಿ ಕೊಳವೆ ಬಾವಿ ತೆರೆದು ನೀರು ಕಳ್ಳತನ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.

6.10 ಲಕ್ಷ ಟ್ಯಾಂಕರ್ ನೀರು ಮಾರಾಟ:
ಪಾಂಡ್ಯ ಈ ಕೊಳವೆಬಾವಿಗಳಿಗೆ ಪಂಪ್ ಜೋಡಿಸಿ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ನೀರು ಎತ್ತಿದ್ದಾರೆ. ಮೇಲ್ಕೆತ್ತಿದ್ದ ನೀರನ್ನು ಟ್ಯಾಂಕರ್ ಮಾಲೀಕರಾದ ಅರುಣ್ ಮಿಶ್ರಾ, ಶ್ರವಣ್ ಮಿಶ್ರಾ ಮತ್ತು ಧೀರಜ್ ಮಿಶ್ರಾ ಎಂಬವರ ಮುಖಾಂತರ ಮಾರಾಟ ಮಾಡಿದ್ದಾರೆ. 2006ರಿಂದ 2017ರ ನಡುವೆ ಒಟ್ಟು 6.10 ಲಕ್ಷ ಲೀ. ಟ್ಯಾಂಕರ್ ನೀರು ಮಾರಿದ್ದಾರೆ ಎಂದು ಎಫ್‍ಐಆರ್ ದಾಖಲಾಗಿದೆ.

ಒಂದು ಟ್ಯಾಂಕರ್ 10 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಒಂದು ಟ್ಯಾಂಕರ್ ಅಂದಾಜು 12 ಸಾವಿರ ರೂ. ನೀಡಿ ಖರೀದಿಸುತ್ತಾರೆ. ಈ ಬಾವಿಗಳನ್ನು ಶಾಶ್ವತವಾಗಿ ಮುಚ್ಚುವಂತೆ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

Comments

Leave a Reply

Your email address will not be published. Required fields are marked *